ADVERTISEMENT

ಅನುದಾನ ಕಡಿತಗೊಳಿಸದಂತೆ ಸುರೇಶ್‌ಕುಮಾರ್ ಪತ್ರ

​ಪ್ರಜಾವಾಣಿ ವಾರ್ತೆ
Published 15 ಮೇ 2019, 20:45 IST
Last Updated 15 ಮೇ 2019, 20:45 IST
ಎಸ್‌. ಸುರೇಶ್‌ ಕುಮಾರ್‌
ಎಸ್‌. ಸುರೇಶ್‌ ಕುಮಾರ್‌   

ಬೆಂಗಳೂರು: ‘ಶಾಸಕರ ಕ್ಷೇತ್ರಾಭಿವೃದ್ಧಿಗೆ ನಿಗದಿಯಾಗಿರುವ ಅನುದಾನ ಕಡಿತಗೊಳಿಸಲು ಮುಂದಾದರೆ ಪರಿಣಾಮ ಯಾವ ಮಟ್ಟಕ್ಕಾದರೂ ಹೋಗಬಹುದು’ ಎಂದು ಬಿಜೆಪಿ ಶಾಸಕ ಎಸ್. ಸುರೇಶ್‌ಕುಮಾರ್‌ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಹೆಚ್ವುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಅವರಿಗೆ ಸುರೇಶ್‌ ಕುಮಾರ್ ಬರೆದಿರುವ ಪತ್ರದಲ್ಲಿ ‘ನನ್ನ ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ನೀಡುವಲ್ಲಿ ತಾರತಮ್ಯ ನಡೆದುಕೊಂಡೇ ಬಂದಿದೆ. ಈ ವರ್ಷ ಪಕ್ಕದ ಕ್ಷೇತ್ರಕ್ಕೆ ಸುಮಾರು ₹400 ಕೋಟಿ ನೀಡಲಾಗಿದ್ದು, ನನ್ನ ಕ್ಷೇತ್ರಕ್ಕೆ ₹105 ಕೋಟಿ ನೀಡಲಾಗಿದೆ’ ಎಂದಿದ್ದಾರೆ.

‘ಇದರಲ್ಲಿಯೂ ₹35 ಕೋಟಿ ಕಡಿತಗೊಳಿಸಿ ತಾವು ಸೂಚಿಸಿದ ಜಾಗಕ್ಕೆ ನೀಡಬೇಕೆಂದು ಸರ್ಕಾರದಲ್ಲಿರುವ ಪ್ರಮುಖರೊಬ್ಬರು ಬರೆದಿರುವ ಪತ್ರ ನಿಮ್ಮ ಕಚೇರಿಗೆ ಬಂದಿರುವ ಮಾಹಿತಿ ಇದೆ. ನನ್ನ ಅನುದಾನದಲ್ಲಿ ಒಂದು ರೂಪಾಯಿ ಕಡಿತವಾದರೂ ಪರಿಣಾಮ ಬೇರೆಯೇ ಆಗಲಿದೆ ಎಂಬುದನ್ನು ವಿನಮ್ರವಾಗಿ ತಿಳಿಸುತ್ತಿದ್ದೇನೆ’ ಎಂದು ಎಚ್ಚರಿಸಿದ್ದಾರೆ.

ADVERTISEMENT

‘ಬಿಜೆಪಿ ಶಾಸಕರ ಅನುದಾನ ಕಡಿತಗೊಳಿಸಲು ಮುಂದಾಗಿರುವ ಖಚಿತ ಮಾಹಿತ ಆಧರಿಸಿ ಈ ಪತ್ರ ಬರೆದಿದ್ದೇನೆ’ ಎಂದು ಸುರೇಶ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.