ಬೆಂಗಳೂರು: ಕೋರಮಂಗಲದ ವಿ.ಆರ್. ಬಡಾವಣೆಯ ಭಾರ್ಗವಿ ಮಹಿಳಾ ಪೇಯಿಂಗ್ ಗೆಸ್ಟ್ಗೆ ನುಗ್ಗಿ ಯುವತಿ ಕೃತಿ ಕುಮಾರಿ ಎಂಬುವವರ ಹತ್ಯೆ ನಡೆದ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಕೋರಮಂಗಲ ಠಾಣೆ ಪೊಲೀಸರು, ಆರೋಪಿಯ ಗುರುತು ಪತ್ತೆ ಹಚ್ಚಿದ್ದಾರೆ.
ಆರೋಪಿ ಅಭಿಷೇಕ್ ಎಂಬುದು ಗೊತ್ತಾಗಿದೆ.
ಆರೋಪಿ ಪಿ.ಜಿಗೆ ನುಗ್ಗಿ ಯುವತಿಯ ಕತ್ತು ಸೀಳಿ ಹತ್ಯೆ ಮಾಡುತ್ತಿರುವ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಡಿವಿಆರ್ ಅನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಭೋಪಾಲ್ನ ಅಭಿಷೇಕ್ ಹಾಗೂ ಬಿಹಾರದ ಕೃತಿ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ಆಗಾಗ್ಗೆ ಪಿ.ಜಿ ಬಳಿಗೆ ಬಂದು ಹೋಗುತ್ತಿದ್ದ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಕೃತಿ ಕುಮಾರಿ ಅವರು ಪ್ರಿಯಕರನಿಂದ ದೂರವಾಗಲು ತೀರ್ಮಾನಿಸಿದ್ದರು. ಇದರಿಂದ ಸಿಟ್ಟಿಗೆದ್ದಿದ್ದ ಆತ ಮಂಗಳವಾರ ರಾತ್ರಿ ಪಿ.ಜಿಗೆ ನುಗ್ಗಿ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದರು.
ಆರೋಪಿ ಬೆಂಗಳೂರಿನಲ್ಲೇ ತಲೆಮರೆಸಿಕೊಂಡಿದ್ದಾನೆ. ಸುಳಿವು ಸಿಕ್ಕಿದ್ದು, ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.