ದಾಬಸ್ಪೇಟೆ: ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ ಜಪ್ತಿ ಮಾಡಿ ಠಾಣೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಮ್ಯಾಕ್ಸಿಕ್ಯಾಬ್ನಲ್ಲೇ ಮಂಗಳವಾರ ಅಪರಿಚಿತ ಶವ ಪತ್ತೆಯಾಗಿದ್ದು, ಪೊಲೀಸರು ಹೌಹಾರಿದ್ದಾರೆ.
ಮೋಟಾರು ವಾಹನಗಳ ಕಾಯ್ದೆ ಹಾಗೂ ಸಂಚಾರ ನಿಯಮ ಉಲ್ಲಂಘಿಸಿ ಸಂಚರಿಸುವ ವಾಹನಗಳ ಪತ್ತೆಗಾಗಿ ನೆಲಮಂಗಲ ಆರ್ಟಿಒ, ಇತ್ತೀಚೆಗೆ ಕಾರ್ಯಾಚರಣೆ ನಡೆಸಿದ್ದರು. ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ ಕರಿಮಣ್ಣೆ ಗ್ರಾಮದ ಕುಮಾರ್ ಎಂಬುವವರ ಮ್ಯಾಕ್ಸಿಕ್ಯಾಬ್ ಜಪ್ತಿ ಮಾಡಿದ್ದರು.
ನಂತರ, ಮ್ಯಾಕ್ಸಿಕ್ಯಾಬ್ನ್ನು ದಾಬಸ್ಪೇಟೆ ಠಾಣೆ ಮುಂಭಾಗದಲ್ಲಿ ನಿಲ್ಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈಗ ಅದೇ ವಾಹನದಲ್ಲಿ ಅಪರಿಚಿತ ಶವ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
‘ಹಲವು ದಿನಗಳಿಂದ ವಾಹನ ಠಾಣೆ ಮುಂಭಾಗದಲ್ಲಿತ್ತು. ವಾಹನದ ಮಧ್ಯದ ಸೀಟಿನ ಎಡಭಾಗದಲ್ಲಿ ಕುಳಿತ ಸ್ಥಿತಿಯಲ್ಲೇ ಮಂಗಳವಾರ ಬೆಳಿಗ್ಗೆ ಶವ ಪತ್ತೆಯಾಗಿದೆ’ ಎಂದು ಪೊಲೀಸರು ಹೇಳಿದರು.
‘ಮೃತ ವ್ಯಕ್ತಿ ಯಾರು ಎಂಬುದು ಗೊತ್ತಾಗಿಲ್ಲ. ಅಪರಿಚಿತ ಶವ ಬಗ್ಗೆ ದೂರು ದಾಖಲಿಸಿಕೊಳ್ಳಲಾಗಿದೆ. ಇದು ಕೊಲೆಯೋ ಅಥವಾ ಆಕಸ್ಮಿಕವೋ ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ’ ಎಂದು ತಿಳಿಸಿದರು.
ಆಸ್ಪತ್ರೆಗೆ ಬಂದಿದ್ದ ಅನುಮಾನ: ‘ಶವದ ಕೆಲ ಭಾಗದಲ್ಲಿ ಜೇನು ಕಡಿದಿರುವ ಗುರುತುಗಳಿವೆ. ಆ ವ್ಯಕ್ತಿ, ಚಿಕಿತ್ಸೆಗೆಂದು ಸೋಮವಾರ ದಾಬಸ್ ಪೇಟೆ ಆಸ್ಪತ್ರೆಗೆ ಬಂದಿರಬಹುದು ಎಂಬ ಅನುಮಾನವಿದೆ. ಚಿಕಿತ್ಸೆ ಸಿಗದಿದ್ದರಿಂದ ಆತ, ವಾಹನದಲ್ಲಿ ಬಂದು ಕುಳಿತುಕೊಂಡು ಅಲ್ಲಿಯೇ ಸಾವನ್ನಪ್ಪಿರುವ ಸಾಧ್ಯತೆ ಇದೆ’ ಎಂದು ಮೂಲಗಳು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.