ಬೆಂಗಳೂರು: ಜಲಮಂಡಳಿ ವ್ಯಾಪ್ತಿಯಲ್ಲಿ 60 ಸಾವಿರ ಗಿಡಗಳನ್ನು ನೆಡುವ 'ಹಸಿರು ಹಾದಿ - ನೀರಿನ ಭವಿಷ್ಯ' ಅಭಿಯಾನಕ್ಕೆ ಜಲಮಂಡಳಿ ಅಧ್ಯಕ್ಷ ವಿ. ರಾಮ್ಪ್ರಸಾತ್ ಮನೋಹರ್ ಸೋಮವಾರ ಚಾಲನೆ ನೀಡಿದರು.
ಜಿಕೆವಿಕೆ ಆವರಣದಲ್ಲಿ ಜಲಮಂಡಳಿ ಸಿಬ್ಬಂದಿಯೊಂದಿಗೆ 60 ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಅಭಿಯಾನಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ‘ಪ್ರತಿಯೊಬ್ಬರೂ ತಾವು ವಾಸಿಸುವ ಸ್ಥಳದ ಸುತ್ತ ಮುತ್ತ ಗಿಡ ನೆಡುವ ಮೂಲಕ ನಗರವನ್ನು ಇನ್ನಷ್ಟು ಹಸಿರಾಗಿಡಲು ಶ್ರಮಿಸಬೇಕು’ ಎಂದರು.
‘ಬೆಂಗಳೂರು ಜಲಮಂಡಳಿ ನಗರದಲ್ಲಿ ಬಹಳಷ್ಟು ಜಾಗವನ್ನು ಹೊಂದಿದೆ. ಆ ಜಾಗಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರವನ್ನು ಇನ್ನಷ್ಟು ಸಮೃದ್ಧಿಯಾಗಿಸುವುದು ಅಭಿಯಾನದ ಉದ್ದೇಶವಾಗಿದೆ’ ಎಂದರು.
‘ದೊಡ್ಡ ಪ್ರಮಾಣದಲ್ಲಿ ನೀರು ಬಳಸುವ ಗ್ರಾಹಕರು(ಬಲ್ಕ್ ಯೂಸರ್ಸ್), ಅಪಾರ್ಟ್ಮೆಂಟ್ ನಿವಾಸಿಗಳು, ಕೈಗಾರಿಕೆಗಳು, ತಂತ್ರಜ್ಞಾನ ಸಂಸ್ಥೆಗಳು ಹಾಗೂ ವಿದ್ಯಾ ಸಂಸ್ಥೆಗಳಿಗೆ ತಮ್ಮ ಆವರಣಗಳಲ್ಲಿ ಗಿಡ ನೆಟ್ಟು, ಅವುಗಳನ್ನು ಪೋಷಿಸುವ ಜವಾಬ್ದಾರಿ ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸುತ್ತಿದ್ದೇವೆ’ಎಂದು ತಿಳಿಸಿದರು.
‘ಜಲಮಂಡಳಿ ವ್ಯಾಪ್ತಿಯ ಎಲ್ಲ ಉಪ ವಿಭಾಗಗಳಿಗೆ ಹಾಗೂ ಕಚೇರಿಗಳಿಗೆ ತಮ್ಮ ತಮ್ಮ ಪ್ರದೇಶಗಳಲ್ಲಿ ಗಿಡ ನೆಡುವ ಕಾರ್ಯಕ್ಕೆ ಮುಂದಾಗುವಂತೆ ನಿರ್ದೇಶನ ನೀಡಲಾಗಿದೆ' ಎಂದು ತಿಳಿಸಿದರು.
ಮಂಡಳಿಯ ಹಿರಿಯ ಅಧಿಕಾರಿಗಳು, ಎಂಜಿನಿಯರ್ಗಳು ಹಾಗೂ ಸಿಬ್ಬಂದಿಯವರು ಗಿಡ ನೆಡುವ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.