ಬೆಂಗಳೂರು: ‘ನಾಡಗೀತೆ ಹಾಗೂ ಕವಿ ಕುವೆಂಪು ಅವರಿಗೆ ಅವಮಾನ ಮಾಡಿದವರನ್ನು ಕೂಡಲೇ ಪಕ್ಷಾತೀತವಾಗಿ ಗುರುತಿಸಿ, ತಕ್ಕ ಶಿಕ್ಷೆಗೆ ಗುರಿಪಡಿಸಬೇಕು’ ಎಂದುಕರ್ನಾಟಕ ಸುಗಮ ಸಂಗೀತ ಪರಿಷತ್ತು ಅಧ್ಯಕ್ಷವೈ.ಕೆ. ಮುದ್ದುಕೃಷ್ಣ ಆಗ್ರಹಿಸಿದ್ದಾರೆ.
‘ಕನ್ನಡದ ಅಸ್ಮಿತೆಯ ನಾಡಗೀತೆ ಪದೇ ಪದೇ ವಿವಾದಕ್ಕೆ ಈಡಾಗುತ್ತಿರುವುದು ಈ ನಾಡಿನ ದುರಂತವೇ ಸರಿ. ಸಾರ್ವಕಾಲಿಕ ಶ್ರೇಷ್ಠ ಕವಿ, ದಾರ್ಶನಿಕ, ಸಾಹಿತಿ, ನಾಟಕಕಾರ, ವಿಶ್ವಮಾನವ ಕುವೆಂಪು ಅವರಿಗೆ ಮಾಡುತ್ತಿರುವ ಮಹಾ ಅವಮಾನ. ನಾಡಗೀತೆ ಘೋಷಣೆಯಾಗಿ ಸುಮಾರು 20 ವರ್ಷಗಳು ಸಮೀಪಿಸುತ್ತಿರುವಾಗ ಈ ಗೊಂದಲ ಬೇಕೆ? ಆಳುವ ಸರ್ಕಾರಗಳ ಇಚ್ಛಾಶಕ್ತಿ ಕೊರತೆಯೆ ಇದಕ್ಕೆ ಕಾರಣ. ಕುವೆಂಪು ಅವರು ತಮ್ಮ ರಚನೆಯನ್ನು ನಾಡಗೀತೆಯಾಗಿ ಘೋಷಣೆ ಮಾಡಬೇಕೆಂದು ಅರ್ಜಿ ಹಾಕಿದವರಲ್ಲ’ ಎಂದು ತಿಳಿಸಿದ್ದಾರೆ.
‘ನಾಡಗೀತೆ ಧಾಟಿ ಬಗ್ಗೆ ಅಧಿಕೃತವಾಗಿ ಇನ್ನೂ ಆದೇಶ ಹೊರಬಂದಿಲ್ಲ. ಧಾಟಿ ಮತ್ತು ಪಠ್ಯದ ವಿಚಾರ ಈಗ ಮುನ್ನೆಲೆಗೆ ಬಂದು, ಗೊಂದಲದ ಗೂಡಾಗಿದೆ. ನಾಡಗೀತೆಗೆ ಅವಮಾನ ಮಾಡಿದವರನ್ನು, ರಸ ಋಷಿಗೆ ಅವಹೇಳನದ ಮಾತುಗಳ ಮೂಲಕ ಅಗೌರವ ತೋರುತ್ತಿರುವವರನ್ನು ಶಿಕ್ಷೆಗೆ ಒಳಪಡಿಸಬೇಕು.ಕನ್ನಡದ ಅಸ್ಮಿತೆಯ ಘನತೆಯನ್ನು ಉಳಿಸಬೇಕು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.