ಬೆಂಗಳೂರು: ಕಾರು ಮತ್ತು ಲಾರಿಯಲ್ಲಿ ಒಟ್ಟು 277 ಕೆ.ಜಿಯಷ್ಟು ಪ್ರಮಾಣದ ಗಾಂಜಾ ಸಾಗಣೆ ಮಾಡುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿ ರುವ ಬಂಧಿತನಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.
ಈ ಸಂಬಂಧ ಕೊಡಗು ಜಿಲ್ಲೆ ಕುಶಾಲನಗರದ ನಿವಾಸಿ ಸೈಯದ್ ಮೊಹಮ್ಮದ್ ಅಲಿಯಾಸ್ ನಸೀಮ್ ಎಂಬುವವರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯ ಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಜಾಮೀನು ನೀಡಲು ಈ ಪ್ರಕರಣ ಯೋಗ್ಯವಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.
‘ಕಾರಿನ ಡಿಕ್ಕಿಯಲ್ಲಿ ಸಾಗಣೆ ಮಾಡುತ್ತಿದ್ದುದು ಗಾಂಜಾ ಎಂಬುದನ್ನು ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ವರದಿ ದೃಢಪಡಿಸಿದೆ. ಹೀಗಾಗಿ, ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ’ ಎಂದು ನ್ಯಾಯ ಪೀಠ ಹೇಳಿದೆ.
ಪ್ರಕರಣವೇನು?: ಮೊಹಮ್ಮದ್ ತೆರಳುತ್ತಿದ್ದ ಕಾರಿನಲ್ಲಿ 60 ಕೆ.ಜಿ ಮತ್ತು ಆ ಕಾರನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದ ಲಾರಿಯೊಳಗೆ ಇದ್ದ 217 ಕೆ.ಜಿಯಷ್ಟು ಪ್ರಮಾಣದ ಗಾಂಜಾವನ್ನು ಮಂಗಳೂರು ನಗರದ ಆರ್ಥಿಕ ಅಪರಾಧಗಳ ತನಿಖೆ ಮತ್ತು ಮಾದಕ ವಸ್ತು ಸಾಗಣೆ ನಿಗ್ರಹ ದಳದ ಪೊಲೀಸರು ವಶಪಡಿಸಿಕೊಂಡಿದ್ದರು.
ಈ ಕುರಿತಂತೆ ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದರು.
ಆರೋಪಿ ಸೈಯದ್ ಮೊಹಮ್ಮದ್ ಕಳೆದ ಒಂದು ವರ್ಷ ಏಳು ತಿಂಗಳಿನಿಂದ ಜೈಲಿನಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.