ಬೆಂಗಳೂರು: ಬೈಕ್ ಕಳವು ಮಾಡಿಕೊಂಡು ಪರಾರಿಯಾಗುತ್ತಿದ್ದ ಆರೋಪಿ ಎಚ್. ಹರೀಶ್ (29), ಲಾರಿ ಚಾಲಕರೊಬ್ಬರ ಪರ್ಸ್ ಕದ್ದು ಜಾಲಹಳ್ಳಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
‘ಯಶವಂತಪುರದ ಬಾಂಬೆ ಡೈಯಿಂಗ್ ರಸ್ತೆಯ ನಿವಾಸಿ ಹರೀಶ್, ಬೈಕ್ ಹಾಗೂ ಪರ್ಸ್ ಕಳ್ಳತನ ಮಾಡುತ್ತಿದ್ದ. ಆತನಿಂದ ₹ 3 ಲಕ್ಷ ಮೌಲ್ಯದ ಐದು ಬೈಕ್ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ದೂರುದಾರ ಜಯದೇವ್ ಸರ್ಕಾರ್, ಕಾಂಕ್ರೀಟ್ ತುಂಬಿದ್ದ ಲಾರಿ ಚಲಾಯಿಸಿಕೊಂಡು ಹೆಬ್ಬಾಳ ಕಡೆಯಿಂದ ಕುವೆಂಪು ವೃತ್ತದತ್ತ ಹೊರಟಿದ್ದರು. ಬೈಕ್ನಲ್ಲಿ ಬಂದು ಲಾರಿಯನ್ನು ಅಡ್ಡಗಟ್ಟಿದ್ದ ಆರೋಪಿ ಹರೀಶ್, ರಸ್ತೆ ತಿರುವಿನಲ್ಲಿ ಇಂಡಿಕೇಟರ್ ಏಕೆ ಹಾಕಿಲ್ಲವೆಂದು ಗಲಾಟೆ ಮಾಡಿದ್ದ. ಸ್ಥಳದಲ್ಲಿದ್ದ ಜನರು ಜಗಳ ಬಿಡಿಸಿ ಕಳುಹಿಸಿದ್ದರು. ಆರೋಪಿ ಸಹ ಸ್ಥಳದಿಂದ ಹೊರಟು ಹೋಗಿದ್ದ.’
‘ಕೆಲ ನಿಮಿಷ ಬಿಟ್ಟು ಜಯದೇವ್, ತಮ್ಮ ಜೇಬಿನಲ್ಲಿ ನೋಡಿದಾಗ ಪರ್ಸ್ ಇರಲಿಲ್ಲ. ಅದರಲ್ಲಿ ₹ 16,000 ನಗದು ಇತ್ತು. ಗಲಾಟೆ ವೇಳೆಯೇ ಪರ್ಸ್ ಕಳುವಾದ ಬಗ್ಗೆ ಠಾಣೆಗೆ ದೂರು ನೀಡಿದ್ದರು’ ಎಂದೂ ತಿಳಿಸಿದರು.
ಎಂಒಬಿ ಆಗಿದ್ದ ಹರೀಶ್: ‘ಆರೋಪಿಗಾಗಿ ಹುಡುಕಾಟ ನಡೆದಿತ್ತು. ಮಾ. 6ರಂದು ಆರೋಪಿ ಎಂಇಎಸ್ ರಸ್ತೆಯಲ್ಲಿ ಬೈಕ್ನಲ್ಲಿ ಹೊರಟಿದ್ದ. ಆತನನ್ನು ತಡೆದಿದ್ದ ಪೊಲೀಸರು, ಬೈಕ್ ಸಮೇತ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಕೃತ್ಯ ಬಯಲಾಯಿತು’ ಎಂದು ಪೊಲೀಸರು ಹೇಳಿದರು.
‘ಅಪರಾಧ ಹಿನ್ನೆಲೆಯುಳ್ಳ (ಎಂಒಬಿ) ಆರೋಪಿಯಾಗಿದ್ದ ಹರೀಶ್, ಜಾಲಹಳ್ಳಿ, ಯಶವಂತಪುರ, ಬಾಗಲಗುಂಟೆ, ಮಹದೇವಪುರ, ಕೆ.ಆರ್.ಪುರ, ಪುಟ್ಟೇನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಕದ್ದಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದೂ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.