ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಚಿನ್ನ ಹಾಗೂ ಡೈಮಂಡ್ ಹರಳುಗಳಿದ್ದ ಆಭರಣ ಖರೀದಿಸಿ ಹಣ ನೀಡದೇ ವಂಚಿಸಿ ಪರಾರಿಯಾಗಿದ್ದ ಆರೋಪಿ ಶಾಕೀಜ್ ಅಹಮ್ಮದ್ ಖಾನ್ ಅಲಿಯಾಸ್ ಇಮ್ರಾನ್ (27) ಎಂಬುವರನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ರಾಮನಗರ ಜಿಲ್ಲೆಯ ಬಿಡದಿ ಕೇತಗಾನಹಳ್ಳಿ ನಿವಾಸಿ ಶಾಕೀಜ್, ಇತ್ತೀಚೆಗೆ ಆಭರಣ ಸಮೇತ ಪರಾರಿಯಾಗಿದ್ದರು. ಅವರ ವಿರುದ್ಧ ‘ಹೈಯ ಗ್ರಿವಾ’ ಆಭರಣ ಮಳಿಗೆ ಮಾಲೀಕ ಬಾಲಾಜಿ ದೂರು ನೀಡಿದ್ದರು. ಆರೋಪಿಯಿಂದ ₹ 10 ಲಕ್ಷ ಮೌಲ್ಯದ ಆಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಚಿನ್ನ ಹಾಗೂ ಡೈಮಂಡ್ ಹರಳುಗಳಿದ್ದ ಆಭರಣ ಕಾಯ್ದಿರಿಸಿದ್ದ ಆರೋಪಿ, ಅದನ್ನು ತಮ್ಮ ಮನೆ ಬಳಿ ತಂದುಕೊಡುವಂತೆ ಮಳಿಗೆ ಮಾಲೀಕರಿಗೆ ಹೇಳಿದ್ದರು. ಅದರಂತೆ ಮಳಿಗೆ ಕೆಲಸಗಾರರೊಬ್ಬರು, ಮಾನ್ಯತಾ ಟೆಕ್ ಪಾರ್ಕ್ ಬಳಿ ಆಭರಣ ತೆಗೆದುಕೊಂಡು ಹೋಗಿದ್ದರು. ಅವರಿಂದ ಆಭರಣ ಪಡೆದಿದ್ದ ಆರೋಪಿ, ಹಣ ಕೊಟ್ಟಿರಲಿಲ್ಲ. ಮನೆಗೆ ಹೋಗಿ ಬರುವುದಾಗಿ ಹೇಳಿ ಪರಾರಿಯಾಗಿದ್ದರು.’
‘ಕೃತ್ಯದ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ಆರೋಪಿ ಕುರಿತು ಮಾಹಿತಿ ಕಲೆಹಾಕಲಾಯಿತು. ಆಭರಣಗಳನ್ನು ಮಾರಲು ಆರೋಪಿ ಪ್ರಯತ್ನಿಸುತ್ತಿದ್ದರು. ಸೂಕ್ತ ಪುರಾವೆಗಳನ್ನು ಸಂಗ್ರಹಿಸಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದೂ ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.