ಬೆಂಗಳೂರು: ಭೂಗತ ಪಾತಕಿ ಕಲಿ ಯೋಗೇಶ್ ಹೆಸರಿನಲ್ಲಿ ಅಂತರ್ಜಾಲ ಕರೆ ಮಾಡಿದ್ದ ವ್ಯಕ್ತಿಯೊಬ್ಬ ರಾಜ್ಯ ಕಾರ್ಮಿಕ ಪರಿಷತ್ ಸಂಘಟನೆ ಅಧ್ಯಕ್ಷ ರವಿ ಶೆಟ್ಟಿ ಬೈಂದೂರು ಅವರಿಗೆ ಜೀವ ಬೆದರಿಕೆಯೊಡ್ಡಿದ್ದು, ಈ ಸಂಬಂಧ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಜೀವ ಬೆದರಿಕೆ ಸಂಬಂಧ ರವಿ ಶೆಟ್ಟಿ ಬೈಂದೂರು ದೂರು ನೀಡಿದ್ದಾರೆ. ಕಲಿ ಯೋಗೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಸದ್ಯ ಆತನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಇದೆ. ಆತ ಹಲವರಿಗೆ ಜೀವ ಬೆದರಿಕೆಯೊಡ್ಡಿರುವ ಪ್ರಕರಣಗಳು ಇವೆ’ ಎಂದು ಪೊಲೀಸರು ಹೇಳಿದರು.
‘ಬೋಳ ಸಹಕಾರಿ ವ್ಯವಸಾಯ ಸಂಘದ ವಿಚಾರ ಮತ್ತು ಅಕ್ರಮ ಕಲ್ಲು ಕ್ವಾರಿಗಳ ವಿಷಯ ಪ್ರಸ್ತಾಪಿಸಿದ್ದ ವ್ಯಕ್ತಿ, ‘ನಾನು ಭೂಗತ ಪಾತಕಿ ಕಲಿ ಯೋಗೇಶ್. ಸಂಘ ಹಾಗೂ ಕಲ್ಲು ಕ್ವಾರಿಗಳ ವಿಷಯಕ್ಕೆ ಹೋಗಬೇಡ. ಹೋದರೆ, ಒಂದು ಗತಿ ಕಾಣಿಸುತ್ತೇನೆ’ ಎಂಬುದಾಗಿ ಬೈಂದೂರು ಅವರನ್ನು ಬೆದರಿಸಿದ್ದಾನೆ. ಈ ಸಂಗತಿ ದೂರಿನಲ್ಲಿದೆ’ ಎಂದೂ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.