ಬೆಂಗಳೂರು: ‘ಕೃಷಿ ಕಾಯ್ದೆಗಳನ್ನು ವಿರೋಧಿಸಿ ಜನವರಿ 26ರಂದು ಬೆಂಗಳೂರಿನಲ್ಲೂ ‘ಟ್ರ್ಯಾಕ್ಟರ್ ಚಳವಳಿ’ವನ್ನು ನಡೆಸಲಾಗುವುದು’ ಎಂದು ಸಂಯುಕ್ತ ಹೋರಾಟದ ಸಂಯೋಜಕ ಬಡಗಲಪುರ ನಾಗೇಂದ್ರ ತಿಳಿಸಿದರು.
‘ಕೇಂದ್ರ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಹಮ್ಮಿಕೊಂಡಿರುವ ಟ್ರ್ಯಾಕ್ಟರ್ ಚಳವಳಿ ಬೆಂಗಳೂರಿನಲ್ಲೂ ಇರಲಿದೆ. ಪ್ರಮುಖವಾಗಿ ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಿಂದ ರೈತರು ಚಳವಳಿಯಲ್ಲಿ ಭಾಗವಹಿಸಲಿದ್ದಾರೆ. ಟ್ರ್ಯಾಕ್ಟರ್ ಮಾತ್ರವಲ್ಲದೆ, ಟ್ರಕ್, ಟೆಂಪೊ, ಜೀಪ್, ಎತ್ತಿನಗಾಡಿ, ದನಗಳು ಹಾಗೂ ನೇಗಿಲು ಹಿಡಿದು ವಿಶೇಷವಾಗಿ ಚಳವಳಿ ನಡೆಸಲಿದ್ದೇವೆ’ಎಂದು ವಿವರಿಸಿದರು.
‘ಚಳವಳಿಗಾಗಿ ಸಂಯುಕ್ತ ಹೋರಾಟವನ್ನು ಸಜ್ಜುಗೊಳಿಸಲಾಗಿದೆ. ಇದರಲ್ಲಿ ರೈತ ಸಂಘಗಳು, ಮಹಿಳೆಯರು, ಕಾರ್ಮಿಕರು, ವಿದ್ಯಾರ್ಥಿ ಸಂಘಟನೆಗಳು ಭಾಗವಹಿಸಲಿವೆ’ ಎಂದರು.
‘ಚಳವಳಿಯ ರೂಪರೇಷೆಗಳನ್ನು ಕುರಿತಾಗಿ ಅಂತಿಮ ನಿರ್ಧಾರಗಳನ್ನು ಕೈಗೊಳ್ಳಲು ಬುಧವಾರ (ಜ.13) ಬೆಳಿಗ್ಗೆ 11 ಗಂಟೆಗೆ ಗಾಂಧಿಭವನದಲ್ಲಿ ಪ್ರಮುಖರ ಸಭೆ ಹಮ್ಮಿಕೊಳ್ಳಲಾಗಿದೆ. ಸಭೆಯಲ್ಲಿ ಎಲ್ಲ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.