ಬೆಂಗಳೂರು: ಸಂಚಾರ ಪೊಲೀಸ್ ಇಲಾಖೆಯ ಪಶ್ಚಿಮ ವಿಭಾಗದ ವತಿಯಿಂದ ಮಾಗಡಿ ಮುಖ್ಯರಸ್ತೆಯ ಕೊಟ್ಟಿಗೆಪಾಳ್ಯದ ರಾಷ್ಟ್ರೀಯ ಯುನಾನಿ ವೈದ್ಯಕೀಯ ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರ ಅಧ್ಯಕ್ಷತೆಯಲ್ಲಿ ಸಂಚಾರ ಸಂಪರ್ಕ ದಿನ ನಡೆಯಿತು.
ಸಭೆಯಲ್ಲಿ ವಿವಿಧ ಬಡಾವಣೆಯ ನಿವಾಸಿಗಳು ಪಾಲ್ಗೊಂಡು ತಮ್ಮ ಭಾಗದ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದರು.
ಸಂಚಾರ ದಟ್ಟಣೆ, ಪಾದಚಾರಿ ಮಾರ್ಗಗಳ ಒತ್ತುವರಿ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುರಿಯುವಿಕೆ, ಏಕಮುಖ ಮಾರ್ಗದಲ್ಲಿ ವಾಹನಗಳ ಸಂಚಾರ, ಅತಿವೇಗದ ಚಾಲನೆ, ವ್ಹೀಲಿ ಸೇರಿ ವಿವಿಧ ಸಮಸ್ಯೆಗಳ ಕುರಿತು ಸಭೆಯಲ್ಲಿ ಸಾರ್ವಜನಿಕರು ಗಮನ ಸೆಳೆದರು.
ಕೊಟ್ಟಿಗೆಪಾಳ್ಯದ ಬಸ್ ನಿಲ್ದಾಣದ ಬಳಿ ರಸ್ತೆ ದಾಟುವುದಕ್ಕೆ ಜನರಿಗೆ ತೀವ್ರ ಸಮಸ್ಯೆ ಆಗುತ್ತಿದೆ. ಅದನ್ನು ಬಗೆಹರಿಸಿ. ಸುಮನಹಳ್ಳಿ ಬಳಿಯಿರುವ ಸ್ಕೈವಾಕ್ ಅನ್ನು ಯಾರೂ ಬಳಸುತ್ತಿಲ್ಲ. ಅದನ್ನು ಕೊಟ್ಟಿಗೆಪಾಳ್ಯಕ್ಕೆ ಸ್ಥಳಾಂತರ ಮಾಡಿದರೆ ಅನುಕೂಲ ಆಗಲಿದೆ ಎಂದು ಸ್ಥಳೀಯ ನಿವಾಸಿ ಗಿರೀಶ್ ಕುಮಾರ್ ಕೋರಿದರು.
ಇದರ ಜತೆಗೆ ಸಿಗ್ನಲ್ ಸಮಸ್ಯೆ, ಬಿಎಂಟಿಸಿ ಬಸ್ ನಿಲುಗಡೆ ವಿಚಾರಗಳೂ ಸಭೆಯಲ್ಲಿ ಚರ್ಚೆ ನಡೆದವು. ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಎಂ.ಎನ್.ಅನುಚೇತ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.