ADVERTISEMENT

ರಸ್ತೆ ಗುಂಡಿ ಮುಚ್ಚಿದ ಸಂಚಾರ ಪೊಲೀಸರು

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2023, 20:23 IST
Last Updated 1 ಅಕ್ಟೋಬರ್ 2023, 20:23 IST
ಹೊರ ವರ್ತುಲ ರಸ್ತೆಯಲ್ಲಿನ ಗುಂಡಿಗಳನ್ನು ಸಂಚಾರ ಪೊಲೀಸರು ಮುಚ್ಚಿದರು
ಹೊರ ವರ್ತುಲ ರಸ್ತೆಯಲ್ಲಿನ ಗುಂಡಿಗಳನ್ನು ಸಂಚಾರ ಪೊಲೀಸರು ಮುಚ್ಚಿದರು   

ಬೆಂಗಳೂರು: ಹೊರವರ್ತುಲ ರಸ್ತೆಯಲ್ಲಿದ್ದ ಗುಂಡಿಗಳನ್ನು ಸಂಚಾರ ಪೊಲೀಸರು ಮುಚ್ಚಿದ್ದು, ಈ ಕೆಲಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಸ್ತೆಯಲ್ಲಿ ಗುಂಡಿಗಳು ಹೆಚ್ಚಾಗಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದವು. ವಾಹನಗಳು ಸಹ ನಿಧಾನಗತಿಯಲ್ಲಿ ಸಂಚರಿಸುತ್ತಿದ್ದರಿಂದ ದಟ್ಟಣೆಯೂ ಉಂಟಾಗುತ್ತಿತ್ತು.

ಸುಗಮ ಸಂಚಾರಕ್ಕೆ ರಸ್ತೆ ಗುಂಡಿಗಳು ಅಡ್ಡಿಯಾಗಿದ್ದನ್ನು ಗಮನಿಸಿದ್ದ ಎಚ್‌ಎಸ್‌ಆರ್‌ ಲೇಔಟ್ ಸಂಚಾರ ಪೊಲೀಸರು, ತಾವೇ ಸಲಿಕೆ ಹಿಡಿದು ಸಿಮೆಂಟ್‌ ಮಿಶ್ರಿತ ಜಲ್ಲಿ ಕಲ್ಲುಗಳಿಂದ ಗುಂಡಿ ಮುಚ್ಚಿದ್ದಾರೆ.

ADVERTISEMENT

‘27ನೇ ಮುಖ್ಯರಸ್ತೆ ಹಾಗೂ ಅಗರ ಕೆಳ ಸೇತುವೆ ರಸ್ತೆಯಲ್ಲಿ ರಸ್ತೆ ಗುಂಡಿಗಳಿಂದ ಕೂಡಿತ್ತು. ರಸ್ತೆ ನಿರ್ವಹಣೆ ಅಧಿಕಾರಿಗಳಿಗೆ ದೂರು ನೀಡಿದರೂ ದುರಸ್ತಿ ಮಾಡಿರಲಿಲ್ಲ. ಹೀಗಾಗಿ, ಸಂಚಾರ ಪೊಲೀಸರೇ ಗುಂಡಿಗಳನ್ನು ಮುಚ್ಚಿದ್ದಾರೆ’ ಎಂದು ಸ್ಥಳೀಯರೊಬ್ಬರು ಹೇಳಿದರು.

ಪೊಲೀಸರು ರಸ್ತೆ ಗುಂಡಿ ಮುಚ್ಚಿರುವ ಫೋಟೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಲಾಗಿದೆ. ಪೋಟೊ ಹಂಚಿಕೊಂಡಿರುವ ಸಾರ್ವಜನಿಕರು, ‘ಬಿಬಿಎಂಪಿ ಹಾಗೂ ಇತರೆ ಇಲಾಖೆ ಅಧಿಕಾರಿಗಳು ಮಾಡದ ಕೆಲಸವನ್ನು ಪೊಲೀಸರು ಮಾಡಿದ್ದಾರೆ’ ಎಂದು ಹೊಗಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.