ಬೆಂಗಳೂರು: ‘ಆಟೊಗಳಲ್ಲಿ ಅಧಿಕ ದರ ವಸೂಲಿ ಮಾಡುತ್ತಿದ್ದರೆ ಕ್ರಮಕೈಗೊಳ್ಳಿ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸಾರಿಗೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ನಗರದಲ್ಲಿ ಸರ್ಕಾರ ನಿಗದಿತ ದರಕ್ಕಿಂತಲೂ ಹೆಚ್ಚು ವಸೂಲಿ ಮಾಡುತ್ತಿರುವ ಆ್ಯಪ್ ಆಧರಿತ ಆಟೊ, ಬೇರೆ ಮಾದರಿ ಆಟೊ ಚಾಲಕರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ರ್ಯಾಪಿಡೊ, ಓಲಾ ಮುಂತಾದ ಆ್ಯಪ್ಗಳಲ್ಲಿ ವಿಪರೀತ ಪ್ರಯಾಣದರ ತೆಗೆದುಕೊಳ್ಳುತ್ತಿರುವ ಬಗ್ಗೆ ಪ್ರಯಾಣಿಕರು ಮೊಬೈಲ್ ಸ್ಕ್ರೀನ್ಶಾಟ್ ಕಳುಹಿಸುತ್ತಿದ್ದಾರೆ. ಈ ರೀತಿ ಹಗಲು ದರೋಡೆ ಮಾಡುವುದು ಅಕ್ಷಮ್ಯ. ಹೆಚ್ಚಿನ ದರ ಬೇಡಿಕೆ ಇಡುವುದು, ಪ್ರಯಾಣಿಕರು ಒಪ್ಪದೇ ಇದ್ದರೆ ಪ್ರಯಾಣ ರದ್ದುಗೊಳಿಸುವುದು ನಡೆದರೆ ಅಂಥ ಆಟೊಗಳ ಪರ್ಮಿಟ್ ರದ್ದು ಮಾಡುವುದರ ಜೊತೆಗೆ ತಪ್ಪಿತಸ್ಥ ಆಟೊ ಚಾಲಕರು/ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಇಂದಿನಿಂದ ಕ್ರಮ: ‘ಆಟೊಗಳಲ್ಲಿ ಅಧಿಕ ದರ ಕುರಿತು ಅಧಿಕೃತವಾಗಿ ದೂರುಗಳು ಬಂದಿಲ್ಲ. ಶನಿವಾರ ಆರ್ಟಿಒಗಳ ಜೊತೆ ಆಂತರಿಕ ಸಭೆ ನಡೆಸಲಾಗುವುದು. ತಪಾಸಣೆ ನಡೆಸಿ ಅಧಿಕ ದರ ವಸೂಲಿ ಕಂಡುಬಂದರೆ ಕ್ರಮಕ್ಕೆ ಸೂಚಿಸಲಾಗುವುದು. ಶನಿವಾರವೇ ಈ ಕಾರ್ಯಾಚರಣೆ ಆರಂಭವಾಗಲಿದೆ’ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎ.ಎಂ. ಯೋಗೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.