ADVERTISEMENT

ಕೋವಿಡ್ ಮಾರ್ಗಸೂಚಿ ಉಲ್ಲಂಘನೆ: ಸಾಗರ್ ಕ್ಲಿನಿಕ್‌ಗೆ ಬೀಗ

​ಪ್ರಜಾವಾಣಿ ವಾರ್ತೆ
Published 18 ಮೇ 2021, 19:45 IST
Last Updated 18 ಮೇ 2021, 19:45 IST
ಡಾ. ರಾಜು ಕೃಷ್ಣಮೂರ್ತಿ
ಡಾ. ರಾಜು ಕೃಷ್ಣಮೂರ್ತಿ   

ಬೆಂಗಳೂರು: ಕೋವಿಡ್ ಮಾರ್ಗಸೂಚಿಗಳ ಉಲ್ಲಂಘನೆ ಹಾಗೂ ರೋಗಿಗಳಿಗೆ ಸ್ಟಿರಾಯ್ಡ್ ನೀಡಿದ ಆರೋಪದಲ್ಲಿ ಡಾ. ರಾಜು ಕೃಷ್ಣಮೂರ್ತಿ ಅವರ ಮೂಡಲಪಾಳ್ಯದ ಸಾಗರ್ ಕ್ಲಿನಿಕ್‌ ಅನ್ನು ಮಂಗಳವಾರ ಮುಚ್ಚಿಸಲಾಗಿದೆ.

ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ. ಶ್ರೀನಿವಾಸ್ ನೇತೃತ್ವದ ತಂಡವು ಪೊಲೀಸರ ನೆರವಿ
ನೊಂದಿಗೆ ಕ್ಲಿನಿಕ್‌ಗೆ ಬೀಗ ಹಾಕಿಸಿದೆ.

ಮುಖಗವಸು ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕೋವಿಡ್‌ ನಿಯಮಗಳನ್ನು ಪಾಲಿಸದೆಯೇ ಚಿಕಿತ್ಸೆ ನೀಡುತ್ತಿರುವುದಕ್ಕೆ ವೈದ್ಯಕೀಯ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ ಹಾಗೂ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆ ಕಾಯ್ದೆಯನ್ನು (ಕೆಪಿಎಂಇ) ಉಲ್ಲಂಘಿಸಿರುವುದಕ್ಕೆ ಕಾರಣ ಕೇಳಿ ಅವರಿಗೆ ಜಿಲ್ಲಾ ಆರೋಗ್ಯಾಧಿಕಾರಿ ಸೋಮವಾರ ನೋಟಿಸ್ ನೀಡಿದ್ದರು. ಆದರೆ, ನಿಯಮಗಳನ್ನು ಪಾಲಿಸದ ಕಾರಣ ಹಾಗೂ ಸ್ಪಷ್ಟನೆ ನೀಡದ ಕಾರಣ ವಿಜಯನಗರದ ಪೊಲೀಸರ ನೆರವಿನಿಂದ ಮುಚ್ಚಿಸಿದ್ದಾರೆ.

ಸಾರ್ವಜನಿಕರಿಂದ ಪ್ರತಿಭಟನೆ

‌ಡಾ.ರಾಜು ಅವರ ಕ್ಲಿನಿಕ್‌ ಅನ್ನು ಮುಚ್ಚುವುದಕ್ಕೆ ಸಾರ್ವಜನಿಕರು ಹಾಗೂ ರೋಗಿಗಳ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದರು. ಕ್ಲಿನಿಕ್‌ ಮುಚ್ಚಿಸಿದಲ್ಲಿ ರೋಗಿಗಳಿಗೆ ಸಮಸ್ಯೆಯಾಗಲಿದೆ. ವೈದ್ಯಕೀಯ ಮಾಫಿಯಾಕ್ಕೆ ಮಣಿದು ಅವರ ಕ್ಲಿನಿಕ್ ಮುಚ್ಚಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರಾಜು ಅವರು ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಒದಗಿಸುತ್ತಿದ್ದರು. ಕಾಯಿಲೆಯ ಬಗ್ಗೆ ಭಯ ದೂರಮಾಡಿ, ಆತ್ಮವಿಶ್ವಾಸ ತುಂಬುತ್ತಿದ್ದರು. ಅವರು ರೋಗಿಗಳ ಪಾಲಿಗೆ ದೇವರಾಗಿದ್ದರು. ಅವರು ನೀಡಿದ ಚಿಕಿತ್ಸೆಯಿಂದ ಕೋವಿಡ್ ಪೀಡಿತರು ಚೇತರಿಸಿಕೊಂಡಿದ್ದಾರೆ. ಅವರಿಗೆ ಚಿಕಿತ್ಸೆ ಮುಂದುವರಿಸಲು ಅವಕಾಶ ನೀಡಬೇಕು’ ಎಂದು ಪ್ರತಿಭಟನನಿರತರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.