ಬೆಂಗಳೂರು: ‘ಸರ್ಕಾರಿ ಆಸ್ಪತ್ರೆಗಳಿಗೆ ಸಾಕಷ್ಟು ಸೌಕರ್ಯಗಳನ್ನು ಕೊಡಲಾಗಿದೆ. ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವ ಇದ್ದರೆ ಬಡ ರೋಗಿಗಳಿಗೆ ಹೆಚ್ಚು ಅನುಕೂಲ ಆಗಲಿದೆ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಶುಕ್ರವಾರ, ‘ಬೆಂಗಳೂರು ಟ್ರಾಮಾ ಕೋರ್ಸ್ 2018’ಗೆ ಚಾಲನೆ ನೀಡಿದ ಬಳಿಕ ಅವರು
ಮಾತನಾಡಿದರು.
‘ಸಂಜಯ್ ಗಾಂಧಿ, ಕಿದ್ವಾಯಿ, ನಿಮ್ಹಾನ್ಸ್, ಜಯದೇವ ಸಂಸ್ಥೆಗಳು ಸಾಕಷ್ಟು ಉಪಯುಕ್ತ ಸೌಲಭ್ಯಗಳನ್ನು ಹೊಂದಿವೆ. ಹೀಗಿದ್ದರೂ ಜನತಾ ದರ್ಶನದಲ್ಲಿ ಬಹಳಷ್ಟು ರೋಗಿಗಳು ನಮ್ಮ ಬಳಿ ಬಂದು ಸಹಾಯ ಕೇಳುತ್ತಾರೆ. ಕಿಡ್ನಿ ಕಸಿ ಸೇರಿದಂತೆ ಆರೋಗ್ಯದ ಸಮಸ್ಯೆಗಳಿಗೆ ಹಣ ನೀಡಲಾಗದ ಸ್ಥಿತಿಯಲ್ಲಿ ಬಡವರು ಇದ್ದಾರೆ. ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವದಿಂದ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಈ ಕುರಿತು ಟ್ರಾಮಾ ಕೋರ್ಸ್ನಲ್ಲಿ ಚರ್ಚೆಯಾಗಲಿ’ ಎಂದು ಅವರು ಹೇಳಿದರು.
‘ಆರೋಗ್ಯದ ವಿಷಯದಲ್ಲಿ ನಮ್ಮ ರಾಜ್ಯ ಚಾಂಪಿಯನ್ ಆಗಬೇಕು ಎನ್ನುವುದು ನನ್ನ ಕನಸು. ಇತ್ತೀಚೆಗೆ ಅಪಘಾತಗಳು ಹೆಚ್ಚಾಗುತ್ತಿವೆ. ವೈದ್ಯರು ಆಧುನಿಕ ತಂತ್ರಜ್ಞಾನಗಳಿಗೆ ತೆರೆದುಕೊಂಡರೆ ಹೆಚ್ಚಿನ ರೋಗಿಗಳಿಗೆ ಸಹಾಯವಾಗುತ್ತದೆ’ ಎಂದರು.
ಸಂಜಯ್ ಗಾಂಧಿ ಅಪಘಾತ ಮತ್ತು ಅಸ್ಥಿ ಚಿಕಿತ್ಸಾ ಆಸ್ಪತ್ರೆ ನಿರ್ದೇಶಕ ಡಾ.ಎಚ್.ಎಸ್.ಚಂದ್ರಶೇಖರ್, ‘2017ರಲ್ಲಿ ಮೊದಲ ಬಾರಿಗೆ ಟ್ರಾಮಾ ಕೋರ್ಸ್ ಆರಂಭಿಸಿದಾಗ ಯಶಸ್ಸು ಗಳಿಸಿತ್ತು. ವಿಶ್ವದ ಪ್ರಮುಖ ತಜ್ಞ ವೈದ್ಯರು ಒಟ್ಟಿಗೆ ಸೇರುವುದರಿಂದ ಸಾಕಷ್ಟು ಕ್ಲಿಷ್ಟಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಆಸ್ಟ್ರೇಲಿಯಾ, ಜರ್ಮನಿ, ಹಾಂಕಾಂಗ್ ಹಾಗೂ ಭಾರತದ ವೈದ್ಯರು ಇಲ್ಲಿದ್ದಾರೆ. ಹೊಸ ವಿಷಯಗಳನ್ನು ಕಲಿಯುವುದು ಹಾಗೂ ಹಂಚಿಕೊಳ್ಳುವುದು ಇದರ ಉದ್ದೇಶ’ ಎಂದು ಅವರು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.