ADVERTISEMENT

ಟೈಡಾಲ್ ಮಾತ್ರೆ ಸೇವನೆ ಕಾರಣ?  ಡ್ರಗ್ಸ್ ಚಟಕ್ಕೆ ಇಬ್ಬರು ಯುವಕರು ಬಲಿ ಶಂಕೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 11:33 IST
Last Updated 20 ನವೆಂಬರ್ 2019, 11:33 IST
   

ಬೆಂಗಳೂರು: ಮಲ್ಲೇಶ್ವರಂನ ಕೋದಂಡರಾಮ ನಗರದಲ್ಲಿ ಡ್ರಗ್ಸ್ ಚಟಕ್ಕೆ ಇಬ್ಬರು ಯುವಕರು ಬಲಿಯಾದ ಶಂಕೆ ವ್ಯಕ್ತವಾಗಿದೆ.

ಸೋಮವಾರ ರಾತ್ರಿ‌ ನಡೆದ ಹುಟ್ಟುಹಬ್ಬದ ಪಾರ್ಟಿಯಲ್ಲಿ ಇಬ್ಬರು ಯುವತಿಯರು ಸೇರಿ ಒಟ್ಟು 11 ಮಂದಿ ಮಂದಿ‌ ಡ್ರಗ್ಸ್ ಸೇವಿಸಿದ್ದಾರೆ ಎನ್ನಲಾಗಿದೆ.

ಈ ಪೈಕಿ ಕೆಲವರಿಗೆ ಮಂಗಳವಾರ ಬೆಳಿಗ್ಗೆ ಇದ್ದಕ್ಕಿದ್ದಂತೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ ಅಭಿಲಾಷ್ ಮತ್ತು ಗೋಪಿ ಎಂಬಿಬ್ಬರು ಮೃತಪಟ್ಟಿದ್ದಾರೆ. ಕೆಲವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ADVERTISEMENT

ಜ್ವರದಿಂದ ಸಾವು ಸಂಭವಿಸಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ.

ಡಿಸಿಪಿ ಚೇತನ್ ಸಿಂಗ್ ರಾಥೋಡ್ ಪ್ರತಿಕ್ರಿಯಿಸಿ, 'ಘಟನೆ ಸಂಬಂಧ ವೈಯಾಲಿಕಾವಲ್ ಠಾಣೆಯಲ್ಲಿ ಎರಡು ಅಸಹಜ ಸಾವು ಪ್ರಕರಣ ದಾಖಲಾಗಿದೆ. ನಮಗೆ ಬಂದಿರುವ ಮಾಹಿತಿ ಪ್ರಕಾರ ಇವರು ಟೈಡಾಲ್ ಎಂಬ ಮಾತ್ರೆಯನ್ನು ತೆಗೆದುಕೊಂಡು ಅಸ್ವಸ್ಥರಾಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇನ್ನೊಬ್ಬ ಯುವಕನ ಸ್ಥಿತಿ ಗಂಭಿರವಾಗಿದೆ' ಎಂದರು.

'ಟೈಡಾಲ್ ಮಾತ್ರೆ ಡಾಕ್ಟರ್ ಚೀಟಿ ಇಲ್ಲದೆ ಕೊಡುವ ಹಾಗಿಲ್ಲ. ಆದರೆ, ಅವರು ಎಲ್ಲಿಂದ ಮಾತ್ರೆ ತೆಗೆದುಕೊಂಡಿದ್ದಾರೆ ನೋಡಬೇಕು. ಇದನ್ನು ನೇರವಾಗಿ ಸಿರಿಂಜ್ ಮೂಲಕ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಆಲ್ಕೋಹಾಲ್ ಮೂಲಕ ತೆಗೆದುಕೊಂಡರೆ ರಿಯಾಕ್ಷನ್ ಆಗುತ್ತದೆ ಅಂತ ಗೊತ್ತಾಗಿದೆ. ಸದ್ಯ ಮರಣೋತ್ತರ ವರದಿ ಬಂದಿದೆ. ವರದಿಯನ್ನು ಮೆಡಿಕಲ್ ವೆರಿಪಿಕೇಷನ್ ಗೆ ಕಳುಹಿಸಲಾಗುವುದು. ಮೆಡಿಕಲ್ ರಿಪೋರ್ಟ್ ನಲ್ಲಿ ಬೇರೆ ಬಂದರೆ ಕೇಸ್ ಬೇರೆ ರೀತಿ ಆಗುತ್ತದೆ' ಎಂದರು.

ವೈದ್ಯಕೀಯ ಪರೀಕ್ಷೆಯಿಂದ ಇದು ರೆಗ್ಯೂಲರ್ ಆಗಿ ತೆಗೆದುಕೊಳ್ಳುತ್ತಿದ್ದರೋ ಎನ್ನುವುದು ಗೊತ್ತಾಗುತ್ತದೆ. ಈ ಮಾತ್ರೆ ಡೈರೆಕ್ಟ್ ಆಗಿ ನೀರಿನಲ್ಲಿ ಹೊಟ್ಟೆಗೆ ತೆಗೆದುಕೊಂಡರೆ ಪೈನ್ ಕಿಲ್ಲರ್. ಅದೇ ಮಾತ್ರೆ ಪುಡಿ ಮಾಡಿ ಇಂಜೆಕ್ಟ್ ಮಾಡಿಕೊಂಡರೆ ಓವರ್ ಡೋಸ್ ಆಗುತ್ತದೆ ಎಂದೂ ವಿವರಿಸಿದರು.

ಜಾತ್ರೆ ಖುಷಿಯಲ್ಲಿ ಡ್ರಗ್ಸ್ ಚಟಕ್ಕೆ ಬಲಿ?

ಶನಿವಾರದಿಂದ (ನ. 16) ಸೋಮವಾರ ( ನ. 18) ವರೆಗೆ ಮಲ್ಲೇಶ್ವರದ ಕೋದಂಡರಾಮಪುರದ ಲಕ್ಷ್ಮೀನರಸಿಂಹಸ್ವಾಮಿ ಜಾತ್ರೆ ನಡೆದಿತ್ತು. ಜಾತ್ರೆಯ ಕೊನೆಯ ದಿನವಾದ ಸೋಮವಾರ ರಾತ್ರಿ ಗೆಳೆಯರೆಲ್ಲ ಮಲ್ಲೇಶ್ವರದ ಫ್ಲೈವರ್ ಮಾರ್ಕೆಟ್ ಬಳಿ ಬಿಬಿಎಂಪಿ ಗ್ರೌಂಡ್ ನಲ್ಲಿ ಪಾರ್ಟಿ ಮಾಡಿದ್ದಾರೆ. ಅಸ್ವಸ್ಥಗೊಂಡಿರುವ ಯುವಕರ ಪೈಕಿ ಒಬ್ಬನ ಬರ್ತಡೇ ಆಚರಿಸಿದ್ದಾರೆ. ಇಬ್ಬರು ಯುವತಿಯರು ಸೇರಿ ಸುಮಾರು 11 ಮಂದಿ ಪಾರ್ಟಿಯಲ್ಲಿದ್ದರು ಎನ್ನಲಾಗಿದೆ.

ನಸುಕಿನಲ್ಲಿ ಎಲ್ಲರಿಗೂ ತೀವ್ರ ಜ್ವರ, ತಲೆ ಸುತ್ತು ಹಾಗೂ ಹೊಟ್ಟೆ ನೋವು ಆರಂಭವಾಗಿದೆ. ಅಭಿಲಾಷ್ ಹಾಗೂ ಗೋಪಿ ಮೃತಪಟ್ಟರೆ, ಮತ್ತೊಬ್ಬ ಚಿಟ್ಟೆ ಅಲಿಯಾಸ್ ಸುಮನ್ ಸ್ಥಿತಿ ಚಿಂತಾಜನಕವಾಗಿದೆ ಎಂದೂ ಹೇಳಲಾಗಿದೆ. ಅಸ್ವಸ್ಥಗೊಂಡವರನ್ನು ಬೇರೆ ಬೇರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಯುವಕರಿಬ್ಬರು ಮೃತಪಟ್ಟು ಒಬ್ಬ ಗಂಭೀರ ಸ್ಥಿತಿಯಲ್ಲಿದ್ದರೂ ಮಾದಕ ವಸ್ತು ಸೇವನೆ ಬಗ್ಗೆ ಪೊಲೀಸರಿಗೆ ಪೋಷಕರು ಮಾಹಿತಿ ನೀಡುತ್ತಿಲ್ಲ ಎನ್ನಲಾಗಿದೆ. ಮರ್ಯಾದೆಗೆ ಅಂಜಿ ಮಕ್ಕಳ ಮಾದಕ ವಸ್ತು ಸೇವನೆ ವ್ಯಸನವನ್ನು ಪೋಷಕರು ಮುಚ್ಚಿಡುತ್ತಿದ್ದಾರೆ ಎಂದೂ ಹೇಳಲಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಕೋದಂಡರಾಮಪುರ ಪ್ರದೇಶದ ಸುತ್ತಮುತ್ತ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.