ಬೆಂಗಳೂರು: ‘ಅನಗತ್ಯ ಹಾಗೂ ಕ್ಷುಲ್ಲಕ ದಾವೆಗಳನ್ನು ಹೊತ್ತು ಕೋರ್ಟ್ ಮೆಟ್ಟಿಲು ತುಳಿಯುವ ಸರ್ಕಾರ ನ್ಯಾಯಾಂಗದ ಅಮೂಲ್ಯ ಸಮಯವನ್ನು ವ್ಯಯ ಮಾಡುತ್ತಿದೆ’ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ನಿವೃತ್ತ ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಎಂ.ರಹಮತ್ಉಲ್ಲಾ ವಿರುದ್ಧದ ಪ್ರಕರಣದಲ್ಲಿ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ನರೇಂದರ್ ಮತ್ತು ನ್ಯಾಯಮೂರ್ತಿ ಪಿ.ಎನ್ ದೇಸಾಯಿ ಅವರಿದ್ದ ವಿಭಾಗೀಯ ನ್ಯಾಯಪೀಠ, ‘ಈ ರೀತಿಯ ವ್ಯಾಜ್ಯಗಳನ್ನು ನಿಯಂತ್ರಿಸದೇ ಇದ್ದರೆಯಾವ ಅಧಿಕಾರಿಗಳು ವ್ಯಾಜ್ಯಕ್ಕೆ ಕಾರಣವಾಗುತ್ತಾರೋ ಅಂತಹವರಿಂದಲೇ ದಂಡ ವಸೂಲು ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದೆ.
‘ವ್ಯಾಜ್ಯ ಪರಿಹಾರ ನೀತಿ–2021 ಅನ್ನು ಕಾನೂನು ಇಲಾಖೆ ರೂಪಿಸಿದ್ದು, ಇದನ್ನು ಪರಿಣಾಮಕಾರಿಯಾಗಿ ಜಾರಿ ಗೊಳಿಸುವ ಬಗ್ಗೆ ಅಧಿಕಾರಿಗಳಿಗೆ ಜಾಗೃತಿ ಮೂಡಿಸಬೇಕು. ಈ ಕುರಿ ತಂತೆ ರಾಜ್ಯದಲ್ಲಿ ವಿಭಾಗಾವಾರು ಕಾರ್ಯಾಗಾರಗಳನ್ನು ನಡೆಸಬೇಕು’ ಎಂದು ಸರ್ಕಾರಕ್ಕೆ ನಿರ್ದೇಶಿಸಿರುವ ನ್ಯಾಯ ಪೀಠ, ನೀತಿ ಸಂಹಿತೆಯ ದಾಖಲೆಯನ್ನು ಎಲ್ಲಾ ಇಲಾಖೆಗಳಿಗೆ ರವಾನಿಸಲು ಕ್ರಮ ಕೈಗೊಳ್ಳುವಂತೆ ಅಡ್ವೊಕೇಟ್ ಜನರಲ್ ಕಚೇರಿಗೂ ನಿರ್ದೇಶಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.