ADVERTISEMENT

ಪ್ರಚಾರಕ್ಕೆ ಮಕ್ಕಳ ಬಳಕೆ: ಚುನಾವಣಾ ಆಯೋಗಕ್ಕೆ ಪತ್ರ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2023, 20:14 IST
Last Updated 27 ಮಾರ್ಚ್ 2023, 20:14 IST
   

ಬೆಂಗಳೂರು: ಚುನಾವಣಾ ಪ್ರಚಾರ ಕಾರ್ಯದಲ್ಲಿ ಮಕ್ಕಳನ್ನು ಬಳಸಿಕೊಳ್ಳದಂತೆ ಸುತ್ತೋಲೆ ಹೊರಡಿಸಬೇಕು ಎಂದು ಕೋರಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿದೆ.

ವಿವಿಧ ರಾಜಕೀಯ ಪಕ್ಷಗಳ ಮೆರವಣಿಗೆಗಳಲ್ಲಿ ಮಕ್ಕಳು ಪಕ್ಷಗಳ ಬಾವುಟ ಹಿಡಿದು ಸಾಗುತ್ತಿರುವ ಪ್ರಕರಣಗಳು ಕಂಡು ಬರುತ್ತಿವೆ. ಸಮಾವೇಶ, ಮೆರವಣಿಗೆಯಲ್ಲಿ ಹೆಚ್ಚು ಜನರ ಉಪಸ್ಥಿತಿ ತೋರಿಸಲು ಮಕ್ಕಳನ್ನೂ ಬಳಸಿಕೊಳ್ಳಲಾಗುತ್ತಿದೆ. ಮಕ್ಕಳಿಗೆ ಪಕ್ಷದ ಚಿಹ್ನೆ ಇರುವ ಬಟ್ಟೆ ತೊಡಿಸುವುದು, ಪಕ್ಷದ ವಿವರ ಇರುವ ನೋಟ್‌ಬುಕ್‌ ಹಂಚುವುದು ನಡೆಯುತ್ತಿದೆ. ಮಕ್ಕಳು ರಾಜಕೀಯ ಪಕ್ಷಗಳನ್ನು ಸಮರ್ಥಿಸಿಕೊಂಡಿರುವ ವಿಡಿಯೊಗಳನ್ನು ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಲಾಗುತ್ತಿದೆ ಎಂದು
ಆಯೋಗದ ಅಧ್ಯಕ್ಷ ನಾಗಣ್ಣ ಗೌಡ ಪತ್ರದಲ್ಲಿ
ವಿವರಿಸಿದ್ದಾರೆ.

ಮಕ್ಕಳ ಬಳಕೆ ಮಾಡದಂತೆ ಎಲ್ಲ ರಾಜಕೀಯ ಪಕ್ಷಗಳಿಗೂ ಸೂಚಿಸಬೇಕು. ಅಧಿಕಾರಿಗಳು ನಿಗಾವಹಿಸುವಂತೆ ಆದೇಶಿಸಬೇಕು. ಇಂತಹ ಪ್ರಕರಣಗಳು ಕಂಡು ಬಂದರೆ ಮಾಹಿತಿ ನೀಡಲು ಸಹಾಯವಾಣಿ ಆರಂಭಿಸಬೇಕು ಎಂದು ಸಲಹೆ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.