ಬೆಂಗಳೂರು: ‘ದೇವರಿದ್ದಾನೋ ಇಲ್ಲವೋ ಎಂಬ ಚಿಂತೆಯೂ ಸೇರಿದಂತೆ ಹತ್ತಾರು ಚಿಂತೆಗಳೆಂಬ ಚಿತೆಯಲ್ಲಿ ವಚನಗಳು ಪರಿಹಾರವಾಗಿವೆ’ ಎಂದು ಸಂಸ್ಕೃತಿ ಚಿಂತಕ ಎಸ್. ಷಡಕ್ಷರಿ ಹೇಳಿದರು.
ವಿಜಯನಗರದ ಡಾ. ಮುನಿರಾಜಪ್ಪನವರ ‘ಹೊಂಬೆಳಕು‘ನಲ್ಲಿ ನಡೆದ ವಚನಜ್ಯೋತಿ ಬಳಗದ ವಚನ ಶ್ರಾವಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉಪನ್ಯಾಸಕಿಯಾಗಿ ಮಾತನಾಡಿದ 5ನೇ ತರಗತಿ ವಿದ್ಯಾರ್ಥಿನಿ ಶ್ರಾವಣಿ ಹಣ್ಣಿ, ‘ವಚನವೆಂದರೆ ಬರಿ ಮಾತಲ್ಲ, ಅದು ಪ್ರಮಾಣ. ನಡೆಯೊಳಗೆ ನುಡಿಯ ಪೂರೈಸುವುದೇ ವಚನ’ ಎಂದು ವಿವರಿಸಿದರು.
ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ, ‘ಹೆಚ್ಚುತ್ತಿರುವ ಮೌಢ್ಯಾಚರಣೆಗಳ ಕುರಿತು ಅರಿವು ಮೂಡಿಸಿ ಸರಳ ಶುದ್ದ ಬದುಕನ್ನು ರೂಢಿಸಿಕೊಳ್ಳಬೇಕೆಂಬ ಬಸವಾದಿ ಪ್ರಮಥರ ಸಂದೇಶವನ್ನು ಜನಸಾಮಾನ್ಯರಿಗೆ, ವಿಶೇಷವಾಗಿ ವಿದ್ಯಾರ್ಥಿಗಳಿಗೆ ತಲುಪಿಸಲು ವಚನ ಶ್ರಾವಣ ಆಯೋಜಿಸಲಾಗಿದೆ’ ಎಂದು ಹೇಳಿದರು.
ಪಂ. ದೇವೇಂದ್ರಕುಮಾರ ಪತ್ತಾರ್, ಸರಸ್ವತಿ ಹೆಗಡೆ, ಮೀನಾಕ್ಷಿ ಮೇಟಿ, ಟಿ.ಎಂ. ಜಾನಕಿ, ಈರಯ್ಯ ಚಿಕ್ಕಮಠ್, ಸವಿತಾ ಅಮರೇಶ್, ಚೇತನಾ ಮುಧೋಳ್, ಸಿದ್ದರಾಮ ಕೇಸಾಪುರ, ಚಂದ್ರಮತಿ ಗಿರೀಶ್, ಪೂರ್ಣಿಕ ಆರಾಧ್ಯ ವಚನಗಳನ್ನು ಮನದುಂಬಿ ಹಾಡುವುದರ ಮೂಲಕ ವಚನ ಶ್ರಾವಣಕ್ಕೆ ಮೆರಗು ನೀಡಿದರು.
ಬಳಗದ ಪ್ರಭು, ರಾಜಾ ಗುರುಪ್ರಸಾದ್, ಗಂಗಾಂಬಿಕೆ ಮುನಿರಾಜಪ್ಪ, ಡಾ. ಶಿವದೇವ್, ಎಲೆ ಶಶಿಧರ್, ವಚನ ಕಲಿಕಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.