ಬೆಂಗಳೂರು: ಬೆಳಗಾವಿ–ಬೆಂಗಳೂರು ನಡುವೆ ಆಗಸ್ಟ್ 11ರಿಂದ ಸಂಚರಿಸಲಿರುವ ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಆ.10ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.
ಉತ್ತರ ಕರ್ನಾಟಕ ಮತ್ತು ರಾಜ್ಯ ರಾಜಧಾನಿಯ ನಡುವಿನ ಸಂಪರ್ಕವನ್ನು ಹೆಚ್ಚಿಸುವ ಉದ್ದೇಶದಿಂದ ನೈಋತ್ಯ ರೈಲ್ವೆಯು ವಂದೇ ಭಾರತ್ ಅರೆ-ಹೈಸ್ಪೀಡ್ ರೈಲನ್ನು ಪರಿಚಯಿಸುತ್ತಿದೆ. ಬುಧವಾರ ಹೊರತುಪಡಿಸಿ ವಾರದ ಆರು ದಿನಗಳಲ್ಲಿ ಪ್ರತಿದಿನ ಬೆಳಿಗ್ಗೆ 5.20ಕ್ಕೆ ಬೆಳಗಾವಿಯಿಂದ ಹೊರಡಲಿದೆ. ಮಧ್ಯಾಹ್ನ 1.50ಕ್ಕೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್ಆರ್) ರೈಲು ನಿಲ್ದಾಣಕ್ಕೆ ತಲುಪಲಿದೆ. ಮಧ್ಯಾಹ್ನ 2.20ಕ್ಕೆ ಕೆಎಸ್ಆರ್ ಬೆಂಗಳೂರಿನಿಂದ ವಾಪಸ್ ಹೊರಡಲಿದ್ದು, ರಾತ್ರಿ 10.40ಕ್ಕೆ ಬೆಳಗಾವಿ ತಲುಪಲಿದೆ.
ಬೆಳಗಾವಿಯಿಂದ ಬರುವಾಗ ಬೆಳಿಗ್ಗೆ 7.08ಕ್ಕೆ ಧಾರವಾಡ, 7.30ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ, 8.35ಕ್ಕೆ ಎಸ್ಎಂಎಂ ಹಾವೇರಿ, ಬೆಳಿಗ್ಗೆ 9.25ಕ್ಕೆ ದಾವಣಗೆರೆ, ಮಧ್ಯಾಹ್ನ 12.15ಕ್ಕೆ ತುಮಕೂರು, ಮಧ್ಯಾಹ್ನ 1.03ಕ್ಕೆ ಯಶವಂತಪುರ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ. ಬೆಂಗಳೂರಿನಿಂದ ಹೊರಡುವ ರೈಲು ಮಧ್ಯಾಹ್ನ 2.28ಕ್ಕೆ ಯಶವಂತಪುರ 3.03ಕ್ಕೆ ತುಮಕೂರು, ಸಂಜೆ 5.48ಕ್ಕೆ ದಾವಣಗೆರೆ, ಸಂಜೆ 6.48ಕ್ಕೆ ಎಸ್ಎಂಎಂ ಹಾವೇರಿ, ರಾತ್ರಿ 8ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ ಹಾಗೂ ರಾತ್ರಿ 8.25ಕ್ಕೆ ಧಾರವಾಡದಲ್ಲಿ ನಿಲುಗಡೆ ಹೊಂದಲಿದೆ.
ವಂದೇ ಭಾರತ್ ರೈಲು 8 ಬೋಗಿಗಳನ್ನು ಒಳಗೊಂಡಿದೆ. ಇದರಲ್ಲಿ 4 ಮೋಟರ್ ಕಾರ್, 1 ಟ್ರೈಲಿಂಗ್ ಕಾರ್, 1 ಎಕ್ಸಿಕ್ಯುಟಿವ್ ಕ್ಲಾಸ್/ಟ್ರೈಲಿಂಗ್ ಕಾರ್ ಮತ್ತು 2 ಡ್ರೈವಿಂಗ್ ಟ್ರೈಲರ್ ಕಾರ್ಗಳನ್ನು ಹೊಂದಿದೆ. ಟಿಕೆಟ್ ಕಾಯ್ದಿರಿಸಲು ಮತ್ತು ಇತರ ವಿಚಾರಣೆಗಳಿಗಾಗಿ, ಪ್ರಯಾಣಿಕರು ಭಾರತೀಯ ರೈಲ್ವೆಯ ಅಧಿಕೃತ ವೆಬ್ಸೈಟ್ಗೆ (https://indianrailways.gov.in) ಭೇಟಿ ನೀಡಬಹುದು ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಉದ್ಘಾಟನೆ ದಿನ ಬೆಳಗಾವಿಗೆ ಸಂಚಾರ
ಆಗಸ್ಟ್ 10ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ ಬಳಿಕ ಬೆಳಿಗ್ಗೆ 11.15ಕ್ಕೆ ಕೆಎಸ್ಆರ್ ಬೆಂಗಳೂರಿನಿಂದ ವಂದೇ ಭಾರತ್ ಎಕ್ಸ್ಪ್ರೆಸ್ ಹೊರಡಲಿದೆ. ರಾತ್ರಿ 8ಕ್ಕೆ ಬೆಳಗಾವಿಗೆ ತಲುಪಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.