ಬೆಂಗಳೂರು: ವಿಧಾನಸೌಧದಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಉದ್ಯೋಗಾಕಾಂಕ್ಷಿಗಳಿಂದ ₹ 1.95 ಕೋಟಿ ಪಡೆದು ವಂಚಿಸಲಾಗಿದ್ದು, ಆ ಸಂಬಂಧ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ವಂಚನೆಗೀಡಾದ ಬಾಳಾಸಾಹೇಬ್ ಪಾಟೀಲ ಎಂಬುವರು ದೂರು ನೀಡಿದ್ದಾರೆ. ಬೆಂಗಳೂರಿನ ಪಂಡಿತ್ ನೂಲ, ಪ್ರಕಾಶ್ ನೂಲ, ಹಾಸನ ಹೇಮಾವತಿ ನಗರದ ಸತ್ಯನಾರಾಯಣ ರಾವ್, ಬೆಳಗಾವಿ ಹುಲಿಕಟ್ಟಿಯ ಸುರೇಂದ್ರ ಕರಾಡಿ ಎಂಬುವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ವಿಧಾನಸೌಧದಲ್ಲಿ ಖಾಲಿ ಇರುವ ‘ಗ್ರೂಪ್ – ಡಿ’ ಹಾಗೂ ‘ಗ್ರೂಪ್–ಸಿ’ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ನಮಗೆ ರಾಜಕಾರಣಿಗಳು, ಅಧಿಕಾರಿಗಳು ಪರಿಚಯವಿದ್ದಾರೆ. ನೀವು ಹಣ ನೀಡಿದರೆ ಕೆಲಸ ಕೊಡಿಸುತ್ತೇವೆ’ ಎಂದು ಆರೋಪಿಗಳು ಭರವಸೆ ನೀಡಿದ್ದರು. 51 ಉದ್ಯೋಗಾಕಾಂಕ್ಷಿಗಳಿಂದ ಹಣವನ್ನೂ ಪಡೆದಿದ್ದರು.’
‘ಆರೋಪಿಗಳು, ಯಾರೊಬ್ಬರಿಗೂ ಕೆಲಸ ಕೊಡಿಸಿರಲಿಲ್ಲ. ಹಣ ಕೇಳಿದರೂ ವಾಪಸು ನೀಡಿರಲಿಲ್ಲ’ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.