ಹೆಸರಘಟ್ಟ: ಬೊಮ್ಮಶೆಟ್ಟಿಹಳ್ಳಿ ಗ್ರಾಮದ ಹಿತಚಿಂತನಾ ಚಾರಿಟಬಲ್ ಟ್ರಸ್ಟ್ ಶ್ಯಾಮಭಟ್ಟರ ಪಾಳ್ಯ ಗ್ರಾಮಸ್ಥರಿಗೆ ಸಾಹಿತ್ಯದ ಪುಸ್ತಕಗಳನ್ನು ವಿತರಿಸಿತು.
ಎ.ಆರ್.ಮಣಿಕಾಂತ್ ಅವರು ಬರೆದ ‘ಅಮ್ಮ ಹೇಳಿದ ಎಂಟು ಸುಳ್ಳುಗಳು‘, ಸಿ.ಎಚ್. ಮಂಜುನಾಥ್ ಅವರ ’ಮಿಶ್ರತಳಿಗಳ ಸಾಕಣೆಗೊಂದು ಮಾದರಿ‘, ಎ.ಅರ್. ಕೃಷ್ಣಶಾಸ್ತ್ರಿ ವಿರಚಿತ ’ವಚನಭಾರತ’ ಕೃತಿಗಳನ್ನು ಗ್ರಾಮಸ್ಥರಿಗೆ ವಿತರಣೆ ಮಾಡಲಾಯಿತು.
ಬಳಿಕ ಮಾತನಾಡಿದ ಸಂಸ್ಥೆಯ ನಿರ್ದೇಶಕ ಚಂದ್ರಶೇಖರ್, ‘ಜನರಲ್ಲಿ ಓದುವ ಗೀಳು ಕಡಿಮೆಯಾಗುತ್ತಿದೆ. ಮತ್ತೆ ಓದುವ ಹವ್ಯಾಸ ಬೆಳೆಯಬೇಕೆಂಬ ಉದ್ದೇಶದಿಂದ ಪುಸ್ತಕಗಳನ್ನು ವಿತರಿಸುವ ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದ್ದೇವೆ. ರೈತರಿಗೆ, ರೈತರ ಮಕ್ಕಳಿಗೆ ಇಂದು ಬದುಕಲು ಆತ್ಮವಿಶ್ವಾಸ ಬೇಕಾಗಿದೆ. ಅದನ್ನು ನಮ್ಮ ಕನ್ನಡ ಸಾಹಿತ್ಯದ ತುಂಬುಕೊಡುತ್ತದೆ‘ ಎಂದು ಹೇಳಿದರು.
‘ರಾಷ್ಟ್ರಕವಿ ಕುವೆಂಪು, ದ.ರಾ. ಬೇಂದ್ರೆ, ಶಿವರಾಮ ಕಾರಂತ, ಚದುರಂಗ ಮತ್ತು ಪೂರ್ಣಚಂದ್ರ ತೇಜಸ್ವಿ ಅವರಂತಹ ಮೇಧಾವಿಗಳ ಕೃತಿಗಳು ನಮ್ಮ ಹಳ್ಳಿಯ ಜನರಿಗೆ ತಲುಪಬೇಕು. ಅವರನ್ನು ಪುನಃ ಪುನಃ ಓದಿ ಕೊಳ್ಳುವ ಮೂಲಕ ನಮ್ಮ ಮನಸಾಕ್ಷಿಗಳನ್ನು ಎಚ್ಚರಗೊಳಿಸಬೇಕು‘ ಎಂದರು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ರಾಮಸ್ವಾಮಿ, ಸದಸ್ಯರಾದ ಬೈಲಾ ಮೂರ್ತಿ, ಪ್ರೇಮಾ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.