ಬೆಂಗಳೂರು: ವಿಶ್ವಕರ್ಮರು ವಿಶ್ವದಾದ್ಯಂತ ದೇವಾಲಯಗಳನ್ನು ನಿರ್ಮಿಸುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಪ್ರಚುರ ಪಡಿಸಿದ್ದಾರೆ. ಭಾರತ ಇಂದು ವಿಶ್ವಮಾನ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ಬಿ.ವಿ. ವಸಂತಕುಮಾರ್ ಹೇಳಿದರು.
ನಾ.ಭಾ. ಚಂದ್ರಶೇಖರಾಚಾರ್ಯ ಅವರ ಸಮಗ್ರ ಸಾಹಿತ್ಯ ಕುರಿತ 4ನೇ ಸಂಪುಟವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ’ವಿಶ್ವಕರ್ಮ ಎಂಬುದು ಒಂದು ಜಾತಿ ಅಲ್ಲ. ಅದು ಕುಶಲಿಗರ ವರ್ಗ. ವಿಶ್ವವನ್ನು ಸೃಜಿಸುವ ಕೆಲಸವನ್ನು ಅವರು ಮಾಡಿದ್ದಾರೆ‘ ಎಂದು ತಿಳಿಸಿದರು.
ಶಾಕ್ತ ಸಂಸ್ಕೃತಿಯ ಜನಕರೂ ಆದ ವಿಶ್ವಕರ್ಮರು ಕಾರಣಾಂತರಗಳಿಂದ ಸಂಸ್ಕೃತ ಅಧ್ಯಯನದಿಂದ ವಂಚಿತರಾದದ್ದಿದೆ. ಸಂಸ್ಕೃತ ಅಧ್ಯಯನ, ವೇದ-ಉಪನಿಷತ್ಗಳ ಅಧ್ಯಯನ ಇಂದು ಯಾವುದೇ ಒಂದು ವರ್ಗದ ಸ್ವತ್ತಾಗಿ ಉಳಿದಿಲ್ಲ.ಚಂದ್ರಶೇಖರಾಚಾರ್ಯರು 100 ವರ್ಷಗಳ ಹಿಂದಿನ ಕಾಲದ ಸಂಸ್ಕೃತ ವೇದ, ಉಪನಿಷತ್ಗಳ ಅಧ್ಯಯನ ಮಾಡಿ, ವಿಶ್ವಕರ್ಮರ ಸಾಧನೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ದಾಖಲಿಸಲು ಸಾಧ್ಯವಾಗಿದೆ ಎಂದರು.
ನಾ.ಭಾ. ಚಂದ್ರಶೇಖರಾಚಾರ್ಯರು ಸಂಸ್ಕೃತ ಅಧ್ಯಯನ ಮಾಡಿದ ಫಲವಾಗಿ ಸಂಸ್ಕೃತದಿಂದ ಕನ್ನಡಕ್ಕೆ, ಇಂಗ್ಲಿಷ್ನಿಂದ ಕನ್ನಡಕ್ಕೆ ಹಾಗೂ ತೆಲುಗಿನಿಂದ ಕನ್ನಡಕ್ಕೆ ವೈದಿಕ ಸಾಹಿತ್ಯವನ್ನು ಅನುವಾದಿಸಲು ಸಾಧ್ಯವಾಗಿದೆ. ಒಬ್ಬ ಸಾಹಿತಿಯನ್ನು ಯಾವುದೇ ಜಾತಿ, ವರ್ಗ ದೇಶಕ್ಕೆ ಸೀಮಿತಗೊಳಿಸಬಾರದು. ನಾ.ಭಾ. ಅವರು ಜಗತ್ತೇ ಮಾನ್ಯ ಮಾಡುವಂತಹ ಲೇಖಕ ಎಂದು ಶ್ಲಾಘಿಸಿದರು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಅರೆಮಾದನಹಳ್ಳಿ ವಿಶ್ವ ಬ್ರಾಹ್ಮಣ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.