15ನೇ ಆವೃತ್ತಿಯ ಡಿಎಕ್ಸ್ಸಿ ಬೆಂಗಳೂರು ವಾಕಥಾನ್ ಡಿ.7ರಂದು ನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ವರ್ಷ ‘ನೀರು ಉಳಿಸಿ, ಜೀವ ಉಳಿಸಿ’ ಎನ್ನುವ ಘೋಷವಾಕ್ಯದೊಂದಿಗೆ ಜಲ ಸಂರಕ್ಷಣೆಯ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಾಕ್ಥಾನ್ ಅನ್ನು ನಗರದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.
‘ಅಂತರರಾಷ್ಟ್ರೀಯ ಅಂಗವಿಕಲರ ದಿನವನ್ನು ಅವಿಸ್ಮರಣೀಯಗೊಳಿಸಲು ಈ ವಾಕಥಾನ್ ಆಯೋಜಿಸಿದ್ದೇವೆ.ಡಿಎಕ್ಸ್ಸಿ ಟೆಕ್ನಾಲಜಿಯು ಕಾರ್ಯಕ್ರಮದ ಮುಖ್ಯ ಪ್ರಾಯೋಜಕತ್ವ ವಹಿಸಿಕೊಂಡಿದೆ. ಹತ್ತು ಸಾವಿರಕ್ಕೂ ಹೆಚ್ಚು ಜನರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಕಾರ್ಯಕ್ರಮ ಇದಾಗಿದೆ’ ಎಂದು ಸಮರ್ಥನಂ ವಿಕಲಚೇತನರ ಟ್ರಸ್ಟ್ ಸಂಸ್ಥಾಪಕ ಮಹಾಂತೇಶ್ ಜಿ.ಕೆ ಹೇಳುತ್ತಾರೆ.
‘ಅಂತರ್ಜಲ ಸಂರಕ್ಷಣೆ, ಮರುಪೂರಣ, ಜಲಸಂರಕ್ಷಣೆಯ ವಿವಿಧ ವಿಧಾನಗಳ ಕುರಿತು ಜಾಗೃತಿ ಮೂಡಿಸುತ್ತೇವೆ. ಬಳಸಿದ ನೀರನ್ನು ಪುನರ್ಬಳಕೆಗೆ ಯೋಗ್ಯಗೊಳಿಸುವ ವಿಧಾನಗಳನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳುವ ಕುರಿತು ತಿಳಿಸಲಾಗುವುದು. ವಿವಿಧ ಕ್ಷೇತ್ರಗಳ ಹಲವಾರು ಜನರು ಈ ಪ್ರಯತ್ನಕ್ಕೆ ಬೆಂಬಲ ನೀಡಿದ್ದಾರೆ. ನಾವು ಅವರಿಗೆ ಆಭಾರಿಯಾಗಿದ್ದೇವೆ. ನಗರದ ಜನತೆ ಡಿ.7ರಂದು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮೊಂದಿಗೆ ಕೈಜೋಡಿಸಬೇಕು’ ಎನ್ನುತ್ತಾರೆ ಮಹಾಂತೇಶ್.
‘ಬೆಂಗಳೂರು ವಾಕಥಾನ್ಗೆ ಮುಖ್ಯ ಪ್ರಾಯೋಜಕರಾಗಲು ನಮಗೆ ಹೆಮ್ಮೆಯಿನಿಸುತ್ತಿದೆ. ಸಮಾಜ ಮತ್ತು ಪರಿಸರದ ಸಂರಕ್ಷಣೆ ಹಾಗೂ ಜಾಗೃತಿಗಾಗಿ ಡಿಎಕ್ಸ್ಸಿ ಟೆಕ್ನಾಲಜಿ ಬದ್ಧವಾಗಿದೆ. ವಿಕಲಚೇತನರ ಜೀವನಮಟ್ಟ ಸುಧಾರಣೆ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೆ ಸದಾ ಕೈಜೋಡಿಸುತ್ತೇವೆ. ಜಲಸರಂಕ್ಷಣೆಯಂಥ ಮಹತ್ವದ ಕಾರ್ಯಕ್ಕೆ ಭಾಗಿಯಾಗಿರುವುದು ಅತ್ಯಂತ ಸಾರ್ಥಕವೆನಿಸುತ್ತಿದೆ’ ಎಂದು ಡಿಎಕ್ಸ್ಸಿ ಟೆಕ್ನಾಲಜಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರೋಮಿ ಮಲ್ಹೋತ್ರಾ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.