ಬೆಂಗಳೂರು: ‘ಆಯುಧ ಪೂಜೆ ಹಿನ್ನೆಲೆಯಲ್ಲಿ ಮನೆ ಮುಂದೆ ಹರಡಿದ ಕಸವನ್ನು ಶೇಖರಿಸಿ, ವಿಂಗಡಿಸದೇ ನೀಡಿದರೆ ದಂಡ ವಿಧಿಸಲಾಗುವುದು’ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ತಿಳಿಸಿದ್ದಾರೆ.
‘ಮನೆ, ಅಂಗಡಿ, ಕಾರ್ಖಾನೆ, ಕಚೇರಿಗಳ ದ್ವಾರದಲ್ಲಿ ಬಾಳೆ ಕಂಬ ಕಟ್ಟುವುದು, ಹೂವಿನ ಅಲಂಕಾರ ಮಾಡುವುದು ಮತ್ತು ಬಾಗಿಲಿಗೆ ಕುಂಬಳಕಾಯಿ, ನಿಂಬೆಹಣ್ಣು, ತೆಂಗಿನಕಾಯಿ ಹೊಡೆಯುವುದು ವಾಡಿಕೆ. ಹಬ್ಬ ಆಚರಣೆ ಬಳಿಕ ಮನೆ ಮುಂದೆ ಮತ್ತು ರಸ್ತೆಯಲ್ಲಿ ಹರಡಿರುವ ಕಸವನ್ನು ವಿಂಗಡಿಸಿ ಪಾಲಿಕೆಯ ಆಟೊ ಅಥವಾ ತಳ್ಳುವ ಗಾಡಿಗಳಿಗೆ ನೀಡಬೇಕು. ಇಲ್ಲದಿದ್ದರೆ ಅವು ಚರಂಡಿಗಳಲ್ಲಿ ತುಂಬಿಕೊಂಡು ಮಳೆ ನೀರು ಸರಾಗವಾಗಿ ಹರಿದು ಹೋಗಲು ಅಡಚಣೆಯಾಗಲಿದೆ. ಹೀಗಾಗಿ, ಸಂಭ್ರಮದಿಂದ ಹಬ್ಬ ಆಚರಿಸುವ ಜತೆಗೆ ಸ್ವಚ್ಛತೆಯನ್ನೂ ಜನರು ಕಾಪಾಡಿಕೊಳ್ಳಬೇಕು’ ಎಂದು ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.