ಬೆಂಗಳೂರು: ‘ಜಲಮಂಡಳಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿದ್ದ ರತ್ನಮ್ಮ ಎಂಬುವರು ₹16 ಲಕ್ಷ ಪಡೆದು ವಂಚಿಸಿದ್ದಾರೆ’ ಎಂದು ಆರೋಪಿಸಿ ಸಾಫ್ಟ್ವೇರ್ ಎಂಜಿನಿಯರ್ ಪವನ್ಸಿಂಹ ಎಂಬುವರು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಗೆ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.
‘ರಾಜರಾಜೇಶ್ವರಿನಗರ ನಿವಾಸಿ ಎನ್ನಲಾದ ರತ್ನಮ್ಮ ಸ್ನೇಹಿತರೊಬ್ಬರ ಮೂಲಕ ಪರಿಚಯವಾಗಿದ್ದರು. ಜಲಮಂಡಳಿಯಲ್ಲಿ ಸಹಾಯಕ ಎಂಜಿನಿಯರ್ ಹುದ್ದೆಗಳು ಖಾಲಿ ಇದ್ದು, ಭರ್ತಿಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿರುವುದಾಗಿ ಹೇಳಿದ್ದರು. ಒಂದು ಹುದ್ದೆಗೆ ₹ 50 ಲಕ್ಷ ನಿಗದಿ ಮಾಡಿರುವುದಾಗಿ ತಿಳಿಸಿದ್ದರು. ಅಷ್ಟು ಹಣ ಕೊಡಲು ಆಗುವುದಿಲ್ಲವೆಂದು ನಾನು ಹೇಳಿದ್ದೆ’ ಎಂದು ಪವನ್ಸಿಂಹ ದೂರಿನಲ್ಲಿ ತಿಳಿಸಿದ್ದಾರೆ.
‘ಮಾತುಕತೆ ಬಳಿಕ ₹ 25 ಲಕ್ಷಕ್ಕೆ ರತ್ನಮ್ಮ ಒಪ್ಪಿದ್ದರು. ನಂತರ, ಹಂತ ಹಂತವಾಗಿ ₹ 16 ಲಕ್ಷ ಪಡೆದಿದ್ದರು. ಉಳಿದ ಹಣ ಕೊಡುವಂತೆಯೂ ಒತ್ತಾಯಿಸುತ್ತಿದ್ದರು. ಅನುಮಾನ ಬಂದು ಜಲಮಂಡಳಿ ಕಚೇರಿಗೆ ಹೋಗಿ ವಿಚಾರಿಸಿದ್ದೆ. ಅವಾಗಲೇ ರತ್ನಮ್ಮ ಹಲವರಿಗೆ ವಂಚನೆ ಮಾಡಿದ್ದು ತಿಳಿಯಿತು’ ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.