ಕೆ.ಆರ್.ಪುರ: ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವಂತೆ ಒತ್ತಾಯಿಸಿ ವರ್ತೂರಿನ ಸ್ವಾಭಿಮಾನಿ ಬಳಗದ ಕಾರ್ಯಕರ್ತರು ಹಾಗೂ ವರ್ತೂರು ಗ್ರಾಮದ ನಿವಾಸಿಗಳು ವರ್ತೂರು ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ನೀರುಗಂಟಿಗಳು ತಾರತಮ್ಯ ಎಸಗುತ್ತಿದ್ದು, ವರ್ತೂರು ಸುತ್ತಮುತ್ತಲಿನ ನಿವಾಸಿಗಳು ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ. ನೀರಿನ ಸಮಸ್ಯೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಥವಾ ಅಧಿಕಾರಿಗಳ ಬಳಿ ಹಂಚಿಕೊಂಡರೆ ನೀರುಗಂಟಿಗಳು ನಮ್ಮ ಮನೆಗಳಿಗೆ ನೀರನ್ನೇ ಬಿಡುತ್ತಿಲ್ಲ ಎಂದು ಆಪಾದಿಸಿದರು.
ನೂತನವಾಗಿ ಕೊರೆಸುತ್ತಿರುವ ಕೊಳವೆಬಾವಿಗಳ ಯಂತ್ರೋಪಕರಣಗಳು ಆಗಾಗ್ಗೆ ಕೆಟ್ಟು ಹೋಗುತ್ತಿವೆ. ಕೆಟ್ಟುಹೋದ ಯಂತ್ರೋಪಕರಣಗಳನ್ನು ಆರು ತಿಂಗಳಾದರೂ ಸರಿಪಡಿಸುವುದಿಲ್ಲ. ಹೊಸ ಕೊಳವೆಬಾವಿಗಳಿಗೆ ಮೋಟಾರ್ ಅಳವಡಿಸಿಲ್ಲ. ಇದ್ದರಿಂದ ನೀರಿನ ಸಮಸ್ಯೆ ಬಿಗಡಾಯಿಸಿದೆ ಎಂದು ಸಾರ್ವಜನಿಕರು ದೂರಿದರು.
ಸಮರ್ಪಕ ನೀರು ಪೂರೈಸದ ಬಗ್ಗೆ ಹಲವು ಬಾರಿ ಬಿಬಿಎಂಪಿ ವಾರ್ಡ್ ಎಂಜಿನಿಯರ್ಗೆ ದೂರು ನೀಡಿದರೂ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸ್ವಾಭಿಮಾನಿ ಬಳಗದ ಅಧ್ಯಕ್ಷ ಕುಪ್ಪಿ ಮಂಜುನಾಥ್ ದೂರಿದರು.
ಮನವಿ ಸ್ವೀಕರಿಸಿದ ಎಇಇ ವೆಂಕಟೇಶ ಪ್ರತಿಭಟನಕಾರರಿಗೆ ನೀರಿನ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.
ಸ್ವಾಭಿಮಾನಿ ಬಳಗದ ವಿಜಯಕುಮಾರ್, ವರಪುರಿ ನಾರಾಯಣಸ್ವಾಮಿ, ಜೆ.ಕೆ. ರವಿ, ಶ್ರೀನಿವಾಸ್, ಜಗದೀಶ್ ರೆಡ್ಡಿ, ರವಿಶಂಕರ್, ಸರೋಜ, ಲಕ್ಷ್ಮೀಗೋಪಲ್ ರಾವ್, ಮಂಜಳಾ ಸೇರಿದಂತೆ ವರ್ತೂರು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.