ಬೆಂಗಳೂರು: ಸ್ನೇಹಿತರೊಬ್ಬರ ಹೆಸರಿನಲ್ಲಿ ವಾಟ್ಸ್ಆ್ಯಪ್ಗೆ ಬಂದಿದ್ದ ಸಂದೇಶ ನಂಬಿ ನಗರದ ನಿವಾಸಿಯೊಬ್ಬರು ₹ 5 ಲಕ್ಷ ಕಳೆದುಕೊಂಡಿದ್ದು, ಈ ಸಂಬಂಧ ವೈಟ್ಫೀಲ್ಡ್ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ದೇವರಬಿಸನಹಳ್ಳಿಯ 47 ವರ್ಷದ ವ್ಯಕ್ತಿ ದೂರು ನೀಡಿದ್ದಾರೆ. ಇಬ್ಬರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ದೂರುದಾರರಿಗೆ ಆಸ್ಟ್ರೇಲಿಯಾದಲ್ಲಿ ಸ್ನೇಹಿತ ಇದ್ದಾರೆ. ಅದೇ ಸ್ನೇಹಿತನ ಹೆಸರಿನಲ್ಲಿ ಫೆ. 14ರಂದು ವಾಟ್ಸ್ಆ್ಯಪ್ ಸಂದೇಶ ಕಳುಹಿಸಿದ್ದ ಆರೋಪಿಗಳು, ‘ನಾನು ಅಪಾಯದಲ್ಲಿ ಸಿಲುಕಿದ್ದೇನೆ. ತುರ್ತಾಗಿ ಹಣ ಬೇಕಿದೆ’ ಎಂದಿದ್ದರು. ಅದನ್ನು ಖಾತ್ರಿಪಡಿಸಿಕೊಳ್ಳಲು ದೂರುದಾರ, ಸ್ನೇಹಿತನಿಗೆ ಕರೆ ಮಾಡಿದಾಗ ಸಂಪರ್ಕಕ್ಕೆ ಸಿಕ್ಕಿರಲಿಲ್ಲ.’
‘ಸಂದೇಶ ಬಂದಿದ್ದ ವಾಟ್ಸ್ಆ್ಯಪ್ ನಂಬರ್ಗೆ ಸ್ನೇಹಿತನ ಫೋಟೊ ಇತ್ತು. ಅದನ್ನು ನಂಬಿದ್ದ ದೂರುದಾರ, ಆರೋಪಿಗಳು ನೀಡಿದ್ದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ₹ 5 ಲಕ್ಷ ಜಮೆ ಮಾಡಿದ್ದರು. ಕೆಲ ಹೊತ್ತು ಬಿಟ್ಟು ಸ್ನೇಹಿತ ಸಂಪರ್ಕಕ್ಕೆ ಸಿಕ್ಕಿದ್ದ. ತಾನು ಸಂದೇಶ ಕಳುಹಿಸಿಲ್ಲವೆಂದು ಆತ ಹೇಳಿದ್ದ. ಅವಾಗಲೇ ದೂರುದಾರರಿಗೆ ವಂಚನೆ ಬಗ್ಗೆ ಗೊತ್ತಾಗಿದೆ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.