ADVERTISEMENT

ಸಂಪಿಗೆ ರಸ್ತೆ ಸಾರ್ವಜನಿಕ ಬಳಕೆಗೆ ಮುಕ್ತ

​ಪ್ರಜಾವಾಣಿ ವಾರ್ತೆ
Published 1 ಜನವರಿ 2023, 19:45 IST
Last Updated 1 ಜನವರಿ 2023, 19:45 IST
ಸಂಪಿಗೆ ರಸ್ತೆಯಲ್ಲಿ ಸಚಿವ ಡಾ.ಸಿ. ಎನ್. ಅಶ್ವತ್ಥನಾರಾಯಣ ಎಲೆಕ್ಟ್ರಿಕ್‌ ಸ್ಕೂಟರ್‌ ಚಲಾಯಿಸಿದರು 
ಸಂಪಿಗೆ ರಸ್ತೆಯಲ್ಲಿ ಸಚಿವ ಡಾ.ಸಿ. ಎನ್. ಅಶ್ವತ್ಥನಾರಾಯಣ ಎಲೆಕ್ಟ್ರಿಕ್‌ ಸ್ಕೂಟರ್‌ ಚಲಾಯಿಸಿದರು    

ಬೆಂಗಳೂರು: ಮಲ್ಲೇಶ್ವರದಲ್ಲಿ ವೈಟ್ ಟಾಪಿಂಗ್ ಮಾಡಿ ಅಭಿವೃದ್ಧಿಪಡಿಸಿರುವ ಸಂಪಿಗೆ ರಸ್ತೆಯನ್ನು ಸಚಿವ ಡಾ.ಸಿ. ಎನ್. ಅಶ್ವತ್ಥನಾರಾಯಣ ಭಾನುವಾರ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಿದರು.

ಮಲ್ಲೇಶ್ವರ ವೃತ್ತದಲ್ಲಿ ರಾಷ್ಟ್ರಕವಿ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸಚಿವರು, ಯಶವಂತಪುರ ವೃತ್ತದವರೆಗೆ ಒಂದು ಸಾವಿರಕ್ಕೂ ಹೆಚ್ಚು ಉತ್ಸಾಹಿಗಳ ಬೈಕ್ ರಾಲಿಯಲ್ಲಿ ಭಾಗವಹಿಸಿದ್ದರು. ಸಚಿವರು ಎಲೆಕ್ಟ್ರಿಕ್ ಸ್ಕೂಟರ್ ಚಲಾಯಿಸಿದರು.

ನಂತರ ಮಾತನಾಡಿದ ಅವರು ‘ಒಟ್ಟು 7.5 ಕಿ.ಮೀ. ಉದ್ದದ ಈ ದ್ವಿಪಥ ರಸ್ತೆಯನ್ನು ಉತ್ಕೃಷ್ಟ ಗುಣಮಟ್ಟದಲ್ಲಿ ಅಭಿವೃದ್ಧಿಪಡಿಸಲಾಗಿದೆ' ಎಂದರು.

ADVERTISEMENT

‘ಫೀಡರ್ ಲೈನ್, ನೀರು ಪೂರೈಕೆ ಕೊಳವೆ, ಒಳಚರಂಡಿ ಮಾರ್ಗ, ವಿದ್ಯುತ್ ಕೇಬಲ್ ಎಲ್ಲವನ್ನೂ ಈಗ ನೆಲದ ಆಡಿಯಲ್ಲಿ ಅಳವಡಿಸಲಾಗಿದೆ. ಹಾಗೆಯೇ ಪಾದಚಾರಿ ಮಾರ್ಗವನ್ನೂ ಅಭಿವೃದ್ಧಿ ಪಡಿಸಲಾಗಿದೆ. ಮೂಲಸೌಕರ್ಯ ಅಗತ್ಯಗಳಿಗೆಂದು ಮುಂದಿನ ದಿನಗಳಲ್ಲಿ ರಸ್ತೆ ಅಗೆಯುವ ಅನಿವಾರ್ಯತೆ ಇರುವುದಿಲ್ಲ. ಈ ಭಾಗದಲ್ಲಿ ಆಗುತ್ತಿದ್ದ ನೀರಿನ ಪೋಲನ್ನು ಸಹ ಈಗ ನಿಲ್ಲಿಸಲಾಗಿದೆ’ ಎಂದು ಅವರು ವಿವರಿಸಿದರು.

‘ಸಂಪಿಗೆ ರಸ್ತೆಯುದ್ದಕ್ಕೂ 20 ಅಡಿಗೆ ಒಂದರಂತೆ ಸುವ್ಯವಸ್ಥಿತ ರೀತಿಯಲ್ಲಿ ಆಳವಾದ ಮ್ಯಾನ್‌ಹೋಲ್‌ಗಳನ್ನು ಕೂಡ ಅಳವಡಿಸಲಾಗಿದೆ’ ಎಂದರು.

ಪಾಲಿಕೆ ಮಾಜಿ ಸದಸ್ಯರಾದ ಜಯಪಾಲ್, ಮಂಜುನಾಥ, ಮಂಜುನಾಥ ರಾಜು, ಬಿಜೆಪಿ ಮುಖಂಡರಾದ ಸುರೇಶಗೌಡ, ಡಾ.ವಾಸು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.