ADVERTISEMENT

ವನ್ಯಜೀವಿಗಳ ಬದುಕಿನ ಕ್ಷಣ ಛಾಯಾಚಿತ್ರಗಳಲ್ಲಿ ಅನಾವರಣ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2022, 20:34 IST
Last Updated 10 ನವೆಂಬರ್ 2022, 20:34 IST
ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಗುರುವಾರ ವನ್ಯಜೀವಿ ಛಾಯಾಗ್ರಾಹಕ ಸೂರ್ಯಪ್ರಕಾಶ್ ಕೆ.ಎಸ್. ಅವರ ಛಾಯಾಚಿತ್ರಗಳ ಪ್ರದರ್ಶನವನ್ನು ವಿದ್ಯಾರ್ಥಿಗಳು ವೀಕ್ಷಿಸಿದರು – ಪ್ರಜಾವಾಣಿ ಚಿತ್ರ
ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಗುರುವಾರ ವನ್ಯಜೀವಿ ಛಾಯಾಗ್ರಾಹಕ ಸೂರ್ಯಪ್ರಕಾಶ್ ಕೆ.ಎಸ್. ಅವರ ಛಾಯಾಚಿತ್ರಗಳ ಪ್ರದರ್ಶನವನ್ನು ವಿದ್ಯಾರ್ಥಿಗಳು ವೀಕ್ಷಿಸಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ಹುಲಿ ಮರಿಗಳ ಚೆಲ್ಲಾಟ, ಚಿರತೆಗಳ ಓಟ, ಆನೆಗಳ ಗಂಭೀರ ಹೆಜ್ಜೆ ಬಿಂಬಿಸುವ ಛಾಯಾಚಿತ್ರಗಳು ನಗರದ ಚಿತ್ರಕಲಾ ಪರಿಷತ್‌ನಲ್ಲಿ ಅನಾವರಣಗೊಂಡಿವೆ.

ಕೆನರಾ ಬ್ಯಾಂಕ್‌ ನಿವೃತ್ತ ಅಧಿಕಾರಿ ಕೆ.ಎಸ್‌. ಸೂರ್ಯಪ್ರಕಾಶ್‌ ಅವರು ದೇಶ–ವಿದೇಶಗಳಲ್ಲಿ ಅರಣ್ಯಗಳನ್ನು ಸುತ್ತಾಡಿ ವನ್ಯಜೀವಿಗಳ ಅಪರೂಪದ ಈ ಚಿತ್ರಗಳನ್ನು ಸೆರೆಹಿಡಿದಿದ್ದಾರೆ.

ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಸೂರ್ಯಪ್ರಕಾಶ್‌ ಅವರು ಕಳೆದ ಒಂಬತ್ತು ವರ್ಷಗಳಲ್ಲಿ ಸೆರೆಹಿಡಿದಿರುವ ಚಿತ್ರಗಳನ್ನು ಪ್ರದರ್ಶಿಸಿದ್ದಾರೆ. ’ವೆಲ್ಡ್‌ ಮೂಮೆಂಟ್ಸ್‌’ ಶೀರ್ಷಿಕೆ ಅಡಿಯಲ್ಲಿ ಆಯೋಜಿಸಿರುವ ಈ ಪ್ರದರ್ಶನ ನ.13ರವರೆಗೆ ನಡೆಯಲಿದೆ.

ADVERTISEMENT

ರಣಥಂಬೋರ್‌, ಒಡಿಶಾದ ಮಂಗಗಳ ಜೋಡಿ, ತಮಿಳುನಾಡಿನ ವಲ್ಪರೈ ಅರಣ್ಯ ಕೀನ್ಯಾದ ಮಸೈ ಮರ, ತಾಂಜಿನಿಯಾದ ಮೌಂಟ್‌ ಕಿಲಿಮಂಜಾರೊ ರಾಷ್ಟ್ರೀಯ ಉದ್ಯಾನವನ ಸೇರಿ ವಿವಿಧ ಸ್ಥಳಗಳಲ್ಲಿನ ಚಿತ್ರಗಳನ್ನು ಅವರು ಸೆರೆಹಿಡಿದಿದ್ದಾರೆ.

‘ಮೊದಲು ಹವ್ಯಾಸಕ್ಕಾಗಿ ಚಿತ್ರಗಳನ್ನು ತೆಗೆಯುತ್ತಿದ್ದೆ. 32 ವರ್ಷಗಳ ಕಾಲ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದ ನಂತರ ಕಾಡು ಗಳಲ್ಲಿ ಸುತ್ತಾಡಿ ಚಿತ್ರಗಳನ್ನು ತೆಗೆದಿದ್ದೇನೆ. ಈಗ45 ಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿದೆ’ ಎಂದು ಸೂರ್ಯಪ್ರಕಾಶ್‌ ತಿಳಿಸಿದರು.

ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅರಣ್ಯ ಇಲಾಖೆ ನಿವೃತ್ತ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎನ್‌. ಜಯಕುಮಾರ್, ‘ಛಾಯಾಗ್ರಹಣ ಎನ್ನುವುದು ಕಲೆ. ಇಲ್ಲಿ ಬೆಳಕು ಮಹತ್ವದ ಪಾತ್ರವಹಿಸುತ್ತದೆ. ವನ್ಯಜೀವಿಗಳ ಛಾಯಾಚಿತ್ರಗಳನ್ನು ತೆಗೆಯಲು ತಾಳ್ಮೆ ಮುಖ್ಯ. ಅತ್ಯುತ್ತಮ ಚಿತ್ರಕ್ಕೆ ಅಪಾರ ಶ್ರಮ ಬೇಕು’ ಎಂದರು.

‘ಕಳೆದ ಐದು ದಶಕಗಳಲ್ಲಿ ವನ್ಯಜೀವಿಗಳ ಸಂಖ್ಯೆ ಶೇ 69ರಷ್ಟು ಕಡಿಮೆಯಾಗಿದೆ. ಈಗ ಕೇವಲ ಶೇ 31ರಷ್ಟು ವನ್ಯಜೀವಿಗಳು ಮಾತ್ರ ಉಳಿದಿವೆ. ಕೀನ್ಯಾದಲ್ಲಿ ಬರಗಾಲದಿಂದ ಈ ವರ್ಷ 200 ಆನೆಗಳು ಸಾವಿಗೀಡಾಗಿವೆ. ಮನುಷ್ಯನ ದುರಾಸೆಯಿಂದ ಸಮಸ್ಯೆಗಳು ಸೃಷ್ಟಿಯಾಗಿದ್ದು, ವನ್ಯಜೀವಿಗಳ ಬದುಕಿಗೂ ಮಾರಕವಾಗಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

ಖ್ಯಾತ ವೈದ್ಯ ಡಾ. ಅಜೀತ್‌ ಕೆ. ಹುಯಿಲಗೋಳ ಮಾತನಾಡಿ, ‘ತಂತ್ರಜ್ಞಾನ ನಮ್ಮ ಜೀವನಶೈಲಿ ಬದಲಾಯಿಸಿದೆ. ಛಾಯಾಗ್ರಹಣ ಕ್ಷೇತ್ರದಲ್ಲೂ ಇದರಿಂದ ಬದಲಾವಣೆಗಳಾಗಿವೆ. ಆದರೂ ಬೆಳಕನ್ನು ಯಾವ ರೀತಿ ಬಳಸಿಕೊಳ್ಳಲಾಗುತ್ತದೆ ಎನ್ನುವುದೇ ಛಾಯಾಗ್ರಹಣದಲ್ಲಿ ಇಂದಿಗೂ ಮಹತ್ವ ಪಡೆದಿದೆ. ಜತೆಗೆ ವಸ್ತುವಿನ ಹಿಂದಿರುವ ಸನ್ನಿವೇಶವೂ ಮುಖ್ಯವಾಗುತ್ತದೆ’ ಎಂದರು.

‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಬಿ. ಶ್ರೀನಿವಾಸ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.