ಬೆಂಗಳೂರು:‘ಮಹಿಳೆಯರಿಗೆ ತುರ್ತು ಪರಿಸ್ಥಿತಿಯಲ್ಲಿ ಅಗತ್ಯ ನೆರವು ಮತ್ತು ಮಾಹಿತಿಯನ್ನು ನೀಡಲು ದಿನದ24 ಗಂಟೆ ಸ್ಪಂದಿಸಲು ‘181’ ಮಹಿಳಾ ಸಹಾಯವಾಣಿ ಯೋಜನೆ ಅನುಷ್ಠಾನಗೊಳಿಸಲಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಜಯಮಾಲಾ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಗರದಲ್ಲಿ ಬುಧವಾರ ಆಯೋಜಿಸಿದ್ದ ಇಲಾಖೆಯ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಈ ಯೋಜನೆ, ಪೊಲೀಸ್, ಆರೋಗ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಅನುಷ್ಠಾನವಾಗಿದೆ’ ಎಂದರು.
‘ಸ್ವಾಧಾರ ಆನ್ಲೈನ್ ತಂತ್ರಾಂಶ, ಟ್ರಾನ್ಸಿಸ್ಟ್ ಹಾಸ್ಟೆಲ್, ಒನ್ ಸ್ಟಾ- ಸೆಂಟರ್, ದಮನಿತ ಮಹಿಳೆಯರ ರಾಜ್ಯಕೋಶಕ್ಕೆ ಚಾಲನೆ, ಮುಖ್ಯಮಂತ್ರಿಯವರ ಮಾತೃಶ್ರೀ ಯೋಜನೆ, ಇಂದಿರಾ ಮೇಲ್ವಿಚಾರಕಿಯರಿಗೆ ಬಡ್ಡಿ ರಹಿತ ದ್ವಿಚಕ್ರ ವಾಹನ ಸೌಲಭ್ಯದ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದ್ದು, ಇವುಗಳ ಸಮರ್ಪಕ ಬಳಕೆಗೆ ಮಹಿಳೆಯರು ಮುಂದಾಗಬೇಕು’ ಎಂದು ಹೇಳಿದರು.
‘ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮಹಿಳೆಯರು ಅಸಹಾಯಕ ಸ್ಥಿತಿಯಲ್ಲಿ ಇದ್ದಿದ್ದನ್ನು ಮನಗಂಡು, ಸಬಲೀಕರಣಕ್ಕಾಗಿ ರಾಜ್ಯದಾದ್ಯಂತ ಅಧ್ಯಯನ ನಡೆಸಿ, ವರದಿ ಪರಿಶೀಲನೆ ನಂತರ ಯೋಜನೆಗಳನ್ನು ಜಾರಿಗೊಳಿಸಲಾಗಿದೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.