ADVERTISEMENT

ಮಹಿಳೆಯರಿಗೆ ಬೇಕು ರಾಜಕೀಯ ಮೀಸಲಾತಿ: ನಿವೃತ್ತ ನ್ಯಾ. ಎಚ್.ಎನ್. ನಾಗಮೋಹನದಾಸ್

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2021, 19:31 IST
Last Updated 11 ಸೆಪ್ಟೆಂಬರ್ 2021, 19:31 IST
ನಾಗಮೋಹನದಾಸ್
ನಾಗಮೋಹನದಾಸ್   

ಬೆಂಗಳೂರು: ‘ರಾಜಕೀಯ ಮತ್ತು ಆರ್ಥಿಕ ಶಕ್ತಿ ಮಹಿಳೆಯರಿಗೆ ದೊರಕದೆ ಇರುವುದರಿಂದ ಅವರ ಮೇಲೆ ಇಂದಿಗೂ ಗುಲಾಮಗಿರಿ ಮತ್ತು ದೌರ್ಜನ್ಯ ನಡೆಯುತ್ತಿದೆ’ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅಭಿಪ್ರಾಯಪಟ್ಟರು.

ಮಾನವ ಬಂಧುತ್ವ ವೇದಿಕೆಯ ‘ಬಂಧುತ್ವ ಬೆಳಕು' ಉಪನ್ಯಾಸ ಮಾಲಿಕೆಯಡಿ ಏರ್ಪಡಿಸಿದ್ದ ‌‘ಅತ್ಯಾಚಾರ: ಕಾನೂನು ಅಥವಾ ವ್ಯವಸ್ಥೆಯ ವೈಫಲ್ಯವೇ’ ಕುರಿತ ‌‌ಉಪನ್ಯಾಸದಲ್ಲಿ ಅವರು ಮಾತನಾಡಿದರು.

‘ಮಹಿಳೆಯರಿಗೆ ಮೀಸಲಾತಿಯು ಗ್ರಾಮ ಪಂಚಾಯಿತಿ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ ಸಿಕ್ಕಿದೆ. ಇವುಗಳು ಕಾನೂನು ಜಾರಿ ಮಾಡುವ ಸಂಸ್ಥೆಗಳು. ಕಾನೂನು ರಚಿಸುವ ಸಂಸತ್ ಮತ್ತು ವಿಧಾನಸಭೆಯಲ್ಲಿ ಮೀಸಲಾತಿ ಇಂದಿಗೂ ಸಿಕ್ಕಿಲ್ಲ. ಮಹಿಳಾ ಮೀಸಲಾತಿ ಮಸೂದೆಯು 25 ವರ್ಷಗಳ ಹಿಂದೆ ಸಂಸತ್ ಮುಂದೆ ಬಂದರೂ ಅಂಗೀಕಾರ ದೊರಕಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಮಹಿಳೆಯರು ಸಂಸತ್ ಮತ್ತು ವಿಧಾನಸಭೆ ಪ್ರವೇಶಿಸಲು ಇಂದಿಗೂ ಮೀಸಲಾತಿ ನೀಡಿಲ್ಲ ಎಂಬುದು ದೇಶವೇ ನಾಚಿಕೆಪಡುವಂಥದ್ದು. ದೇಶದ ಶೇ 90ರಷ್ಟು ಸಂಪತ್ತು ಪುರುಷರ ವಶದಲ್ಲಿದ್ದರೆ, ಶೇ 10ರಷ್ಟು ಸಂಪತ್ತು ಮಹಿಳೆಯ ಮಾಲೀಕತ್ವದಲ್ಲಿದೆ. ಯಾರಿಗೆ ರಾಜಕೀಯ ಮತ್ತು ಆರ್ಥಿಕ ಶಕ್ತಿ ಇರುವುದಿಲ್ಲವೋ ಅವರು ಇತರರಿಗೆ ಗುಲಾಮರಾಗಿ ಬದುಕಬೇಕಾಗುತ್ತದೆ. ಮಹಿಳೆಯರನ್ನು ಪುರುಷರು ಇಂದಿಗೂ ಗುಲಾಮರಾಗಿ ನಡೆಸಿಕೊಳ್ಳುತ್ತಿರುವುದಕ್ಕೆ ಇದೇ ಕಾರಣ’ ಎಂದರು.

‘ರಾಜಕಾರಣದ ಜೊತೆಗೆ ಧರ್ಮ ಬೆರೆಸಲಾಗುತ್ತಿದೆ. ಧರ್ಮವನ್ನು ರಾಜಕಾರಣದಿಂದ ಬೇರ್ಪಡಿಸುವ ಅನಿವಾರ್ಯತೆ ಇದೆ. ಆ ಮೂಲಕ ಕೋಮುವಾದ ಹಿಮ್ಮೆಟ್ಟಿಸಬೇಕಿದೆ’ ಎಂದರು.

ಚಿಂತಕರಾದ ತಮಿಳ್ ಸೆಲ್ವಿ, ಕೆ. ಶರೀಫಾ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.