ರಾಜರಾಜೇಶ್ವರಿ ನಗರ: ‘ನಗರ ಪಾಲಿಕೆಗಳ ಚುನಾವಣೆಯಲ್ಲಿ ಶೇಕಡ 50ರಷ್ಟು ಮಹಿಳೆಯರನ್ನು ಕಾಂಗ್ರೆಸ್ ಪಕ್ಷ ಕಣಕ್ಕಿಳಿಸಲಿದೆ’ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದರು.
ನಾಗರಬಾವಿಯಲ್ಲಿ ಹಮ್ಮಿಕೊಂಡಿದ್ದ ನವರಾತ್ರಿ ವೈಭವ 2025 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಹೆಣ್ಣು ಮಕ್ಕಳು ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಉತ್ತಮ ಸೇವೆ ಮಾಡಲು ಮುಂದಾಗಬೇಕು ಎನ್ನುವ ಕಾರಣದಿಂದ ಅವಕಾಶವನ್ನು ನೀಡಲಾಗುವುದು’ ಎಂದು ಹೇಳಿದರು.
ಕಾರ್ಯಕ್ರಮ ಆಯೋಜಕರಾದ ಎಚ್.ಕುಸುಮಾ ಮಾತನಾಡಿ, ‘ಎಷ್ಟೇ ನೋವುಗಳಿದ್ದರೂ ಸಂಸಾರವನ್ನು ತೂಗಿಸಿಕೊಂಡು ಹೋಗುತ್ತಿರುವ ತಾಯಂದಿರ ಪಾತ್ರ ದೊಡ್ಡದು. ನಾನಾ ಕ್ಷೇತ್ರದ ನೂರಾರು ತಾಯಂದಿರನ್ನು ಒಂದೆಡೆ ಸೇರಿಸಿ ಅವರನ್ನು ಸತ್ಕರಿಸುವ ಮೂಲಕ ನಾಡ ದೇವತೆ ಹೆಸರಿನಲ್ಲಿ ನವರಾತ್ರಿ ವೈಭವ ಆಚರಿಸಲಾಗುತ್ತಿದೆ’ ಎಂದರು.
ವಿಜ್ಞಾನ, ವೈದ್ಯಕೀಯ, ಶಿಕ್ಷಣ, ಸಾಮಾಜಿಕ, ಎಂಜಿನಿಯರಿಂಗ್, ಕಾರ್ಯಾಂಗ, ನ್ಯಾಯಾಂಗ, ಸಂಗೀತ, ಸಾಹಿತ್ಯ, ಕಲೆ, ಹೋಟೆಲ್ ಉದ್ಯಮ, ಪರಿಸರ, ನೈರ್ಮಲ್ಯ ಸೇರಿ ನಾನಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ 100ಕ್ಕೂ ಹೆಚ್ಚು ಸಾಧಕಿಯರನ್ನು ಸನ್ಮಾನಿಸಲಾಯಿತು.
ಎಚ್.ಮೋನಿಕಾ, ಬೈರಮ್ಮ ಅವರು 5000ಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ಬಾಗಿನ ನೀಡಿದರು. ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹನುಮಂತರಾಯಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.