ADVERTISEMENT

ಕಾರ್ಮಿಕರಿಗೆ ಕೆಲಸ ಸಿಗುತ್ತಿಲ್ಲ: ಅರ್ಥಶಾಸ್ತ್ರಜ್ಞ ಪ್ರಭಾತ್ ಪಟ್ನಾಯಕ್‌

ವಿಚಾರ ಸಂಕಿರಣದಲ್ಲಿ ಅರ್ಥಶಾಸ್ತ್ರಜ್ಞ ಪ್ರಭಾತ್ ಪಟ್ನಾಯಕ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2024, 15:44 IST
Last Updated 17 ಆಗಸ್ಟ್ 2024, 15:44 IST
ವಿಚಾರ ಸಂಕಿರಣದಲ್ಲಿ ಪ್ರೊ.ಬಿ.ಕೆ.ಚಂದ್ರಶೇಖರ್, ಗೀತಾ ಸೇನ್, ಆರ್.ಇಂದಿರಾ, ಪ್ರಭಾತ್ ಪಟ್ನಾಯಕ್ ಪಾಲ್ಗೊಂಡಿದ್ದರು    –ಪ್ರಜಾವಾಣಿ ಚಿತ್ರ
ವಿಚಾರ ಸಂಕಿರಣದಲ್ಲಿ ಪ್ರೊ.ಬಿ.ಕೆ.ಚಂದ್ರಶೇಖರ್, ಗೀತಾ ಸೇನ್, ಆರ್.ಇಂದಿರಾ, ಪ್ರಭಾತ್ ಪಟ್ನಾಯಕ್ ಪಾಲ್ಗೊಂಡಿದ್ದರು    –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ದೇಶದಲ್ಲಿ ಕಾರ್ಮಿಕರ ಲಭ್ಯತೆ ಹೆಚ್ಚುತ್ತಿದೆ. ಅವರಿಗೆ ಮೊದಲಿನಂತೆ ಕೆಲಸ ಸಿಗುತ್ತಿಲ್ಲ. ಹೀಗಾಗಿ, ದೇಶದ ಆರ್ಥಿಕತೆ ಬೆಳವಣಿಗೆ ಆಗುತ್ತಿದೆ ಎಂದು ತೋರಿದರೂ, ಆರ್ಥಿಕ ಅಸಮಾನತೆ ಹೆಚ್ಚುತ್ತಿದೆ’ ಎಂದು ಅರ್ಥಶಾಸ್ತ್ರಜ್ಞ ಪ್ರಭಾತ್ ಪಟ್ನಾಯಕ್‌ ಹೇಳಿದರು.

ನಾಗರಿಕರ ವೇದಿಕೆ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಆರ್ಥಿಕ ಅಸಮತೆ ಮತ್ತು ಸಾಮಾಜಿಕ ದುಷ್ಪರಿಣಾಮಗಳು’ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಮೊದಲು ಕೆಲಸದ ಲಭ್ಯತೆ ಇತ್ತು. ಹೀಗಾಗಿ ಕಾರ್ಮಿಕರಿಗೆ ವಾರದಲ್ಲಿ ನಾಲ್ಕು ದಿನ ಕೆಲಸ ಸಿಗುತ್ತಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ದೇಶದಾದ್ಯಂತ ಲಭ್ಯವಿರುವ ಕಾರ್ಮಿಕರಿಗೆ ವಾರದಲ್ಲಿ ಮೂರು ದಿನವಷ್ಟೇ ಕೆಲಸ ಸಿಗುತ್ತಿದೆ. ಹೀಗಾಗಿ, ಹೆಚ್ಚು ಜನರು ಬಡತನಕ್ಕೆ ಜಾರುತ್ತಿದ್ದಾರೆ. ಆರ್ಥಿಕ ಅಸಮಾನತೆ ಅಂತರ ನೂರು ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದೆ. ಕೇಂದ್ರ ಸರ್ಕಾರವು ಇಂತಹ ದತ್ತಾಂಶಗಳನ್ನು ಹೇಳುವುದಿಲ್ಲ’ ಎಂದರು.

ADVERTISEMENT

ಬೆಂಗಳೂರು ಐಐಎಂನ ಪ್ರಾಧ್ಯಾಪಕಿ ಗೀತಾ ಸೇನ್, ‘ದೇಶದ ಆರ್ಥಿಕ ಬೆಳವಣಿಗೆ ಉತ್ತಮವಾಗಿದೆ, ಜಿಡಿಪಿ ಏರುತ್ತಿದೆ ಎಂದು ಸರ್ಕಾರ ಹೇಳುತ್ತದೆ. ಸರ್ಕಾರ ತನಗೆ ಅನುಕೂಲಕರ ಅಂಕಿ–ಅಂಶಗಳನ್ನಷ್ಟೇ ಹೇಳುತ್ತಿದೆ. ಪ್ರತಿಕೂಲವಾದ ಅಂಕಿಅಂಶಗಳನ್ನು ಮುಚ್ಚಿಡುತ್ತಿದೆ. ಶೇ 50ರಷ್ಟಿರುವ ಕಡುಬಡವರು ಇನ್ನಷ್ಟು ಬಡವರಾಗುತ್ತಿದ್ದಾರೆ. ಸುಮಾರು 8,000 ಮಂದಿ ಅತಿಶ್ರೀಮಂತರು ಶ್ರೀಮಂತರಾಗುತ್ತಲೇ ಇದ್ದಾರೆ’ ಎಂದರು.

‘ಬಡವರು ಅಪೌಷ್ಟಿಕತೆಯಿಂದ ಕುಬ್ಜರಾಗುತ್ತಿದ್ದಾರೆ. ಮೇಲ್ಮಧ್ಯಮ ವರ್ಗ ಮತ್ತು ಅತಿಶ್ರೀಮಂತರು ದಷ್ಟಪುಷ್ಟವಾಗಿ ಬೆಳೆಯುತ್ತಿದ್ದಾರೆ. ಭೌತಿಕವಾಗಿ ಇದು ವಿಚಿತ್ರ ಎನಿಸಬಹುದು. ಆದರೆ, ಈ ರೀತಿ ಎರಡು ಭಿನ್ನ ಜನಾಂಗಗಳು ರೂಪುಗೊಳ್ಳಲು ಆರ್ಥಿಕ ಅಸಮಾನತೆಯೂ ಕಾರಣ’ ಎಂದು ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎಂ.ಎನ್‌.ಪಾಣಿನಿ ಕಳವಳ ವ್ಯಕ್ತಪಡಿಸಿದರು.

ರಾಮಯ್ಯ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಫ್ರೊಫೆಸರ್‌ ಆರ್‌.ಇಂದಿರಾ ವಿಚಾರ ಸಂಕಿರಣ ನಡೆಸಿಕೊಟ್ಟರು.

ದೇಶ ಮುಂದುವರೆಯುತ್ತಿದೆ ಎಂದು ಕೇಂದ್ರ ಸರ್ಕಾರ ದೊಡ್ಡ ಸಂಖ್ಯೆಗಳನ್ನು ತೋರಿಸುತ್ತದೆ. ಆದರೆ ಆರ್ಥಿಕ ಅಸಮಾನತೆ ಬಗ್ಗೆ ಯಾರೂ ಚರ್ಚಿಸುತ್ತಿಲ್ಲ.
ಪ್ರೊ.ಬಿ.ಕೆ.ಚಂದ್ರಶೇಖರ್, ಅಧ್ಯಕ್ಷ ,ನಾಗರಿಕರ ವೇದಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.