
ಬೆಂಗಳೂರು: ನಗರದ ಟೆರಿಯರ್ ಸೆಕ್ಯೂರಿಟಿ ಸರ್ವಿಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹಾಗೂ ಬ್ಲ್ಯೂ ಸ್ಪ್ರಿಂಗ್ ಎಂಟರ್ಪ್ರೈಸ್ ಸಂಸ್ಥೆಗಳು ಐದು ಸಾವಿರಕ್ಕೂ ಹೆಚ್ಚು ಕಾರ್ಮಿಕರಿಗೆ ರಾಜ್ಯ ಸರ್ಕಾರ ನಿಗದಿ ಪಡಿಸಿರುವ ಕನಿಷ್ಠ ವೇತನ ಹಾಗೂ ಇತರೆ ಸೌಲಭ್ಯ ನೀಡುತ್ತಿಲ್ಲ ಎಂದು ಪಂಚತಾರಾ ಹೋಟೆಲ್ ಕಾರ್ಮಿಕರ ಸಂಘದ ಅಧ್ಯಕ್ಷ ಎಂ.ಟಿ.ಸುಭಾಷ್ ಚಂದ್ರ ಆರೋಪಿಸಿದ್ದಾರೆ.
ಈ ಸಂಬಂಧ ರಾಜ್ಯಪಾಲರಿಗೆ ಪತ್ರ ಬರೆದಿರುವ ಅವರು, ‘ಸರಿಯಾದ ಸಮಯಕ್ಕೆ ವೇತನ ಪಾವತಿಸುವುದಿಲ್ಲ. ಸರ್ಕಾರದ ಕಾನೂನು ಕಾಗದದಲ್ಲೇ ಉಳಿದಿದೆ. ಪ್ರತಿಯೊಬ್ಬ ನೌಕರನಿಗೂ ಗ್ರಾಚ್ಯುಟಿ ಹಕ್ಕು ಸಿಗಬೇಕು. ಆದರೆ, ನೌಕರರಿಗೆ ಅನಗತ್ಯ ದಾಖಲೆಗಳು ತರುವಂತೆ, ಅಲೆದಾಡುವಂತೆ ಮಾಡಲಾಗಿದೆ. ಕೆಲಸ ಬಿಟ್ಟವರು ಸವಲತ್ತು ಪಡೆಯಲು ಪರದಾಡುತ್ತಿದ್ದಾರೆ. ಬಡವರು ಜೀವನ ನಡೆಸುವುದೇ ಕಷ್ಟವಾಗಿದೆ’ ಎಂದು ಹೇಳಿದ್ದಾರೆ.
ಸಂಬಂಧಪಟ್ಟ ಇಲಾಖೆಗಳು ಈ ಸಂಸ್ಥೆಗಳ ವೇತನ ಪಾವತಿ, ಪಿಎಫ್, ಇಎಸ್ಐ, ಹಾಜರಿ ದಾಖಲೆಗಳ ಪರಿಶೀಲನೆ ನಡೆಸಬೇಕು. ಈ ಅವಧಿಯಲ್ಲಿ ಕಾರ್ಮಿಕರಿಗೆ ಉದ್ಯೋಗ ಭದ್ರತೆ, ವರ್ಗಾವಣೆ ಮಾಡದಂತೆ ರಕ್ಷಣೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಂಸ್ಥೆಗಳ ವಿರುದ್ಧ ತನಿಖೆಗೆ ಆದೇಶಿಸಬೇಕು ಎಂದು ರಾಜ್ಯಪಾಲರನ್ನು ಅವರು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.