ಬೆಂಗಳೂರು: ವಿಶ್ವ ಶ್ರವಣ ದಿನಾಚರಣೆ ಅಂಗವಾಗಿ ಎಸ್.ಜಿ.ಎಸ್. ವಾಗ್ದೇವಿ ಸಂಪರ್ಕನೂನ್ಯತೆಯುಳ್ಳವರ ಪುನಃಶ್ಚೇತನ ಕೇಂದ್ರದ ವತಿಯಿಂದ ಮಾ.3ರಂದು ನಗರದಲ್ಲಿ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ.
ಕಿವುಡುತನವನ್ನು ಶೀಘ್ರ ಗುರುತಿಸಿ ತಕ್ಕ ಚಿಕಿತ್ಸೆ ಕೊಡಿಸುವ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಜಾಥಾ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 8ಕ್ಕೆ ಆರಂಭವಾಗುವ ಕಾಲ್ನಡಿಗೆಯ ನೇತೃತ್ವವನ್ನು ಶಾಸಕ ರವಿಸುಬ್ರಹ್ಮಣ್ಯ ವಹಿಸಲಿದ್ದಾರೆ. ಗಿರಿನಗರ ವಾರ್ಡ್ನ ಪಾಲಿಕೆ ಸದಸ್ಯೆ ನಂದಿನಿ ಭಾಗವಹಿಸಲಿದ್ದಾರೆ. ಜಾಥಾವು ಗಿರಿನಗರ, ಶ್ರೀನಿವಾಸನಗರ, ಶ್ರೀನಗರ, ಹನುಮಂತನಗರದವರೆಗೆ ಸಾಗಲಿದೆ. ಈ ಕಾಲ್ನಡಿಗೆಯಲ್ಲಿ ಎಲ್ಲ ವಯಸ್ಸಿನವರೂ ಭಾಗವಹಿಸಬಹುದು. 080-26727141 ಸಂಖ್ಯೆಗೆ ಕರೆಮಾಡಿ ಹೆಸರು ನೊಂದಾಯಿಸಿಕೊಳ್ಳಬಹುದು ಎಂದು ಕೇಂದ್ರದ ಪ್ರಕಟಣೆ ತಿಳಿಸಿದೆ.
ನಾಳೆ ಗುದ್ದಲಿ ಪೂಜೆ
ಬೆಂಗಳೂರು: ರಾಮಸೇನಾ ಮಂಡಳಿ ಹಾಗೂ ರಾಮನವಮಿ ಸೆಲಬ್ರೇಷನ್ ಟ್ರಸ್ಟ್, ಪ್ರತಿ ವರ್ಷದಂತೆ ಈ ಬಾರಿಯೂ ಅಂತರರಾಷ್ಟ್ರೀಯ ಸಂಗೀತೋತ್ಸವ ಆಯೋಜಿಸಿದ್ದು, ಕಾರ್ಯಕ್ರಮದ ವಿಶೇಷ ವೇದಿಕೆ ನಿರ್ಮಾಣಕ್ಕೆ ಇದೇ 26ರಂದು ಗುದ್ದಲಿ ಪೂಜೆ ನಡೆಯಲಿದೆ.
ಚಾಮರಾಜಪೇಟೆಯ ಹಳೇಕೋಟೆ ಪ್ರೌಢಶಾಲೆ ಆವರಣದಲ್ಲಿ ನಿರ್ಮಾಣಗೊಳ್ಳಲಿರುವ ಈ ವೇದಿಕೆಗೆ ಬೆಳಿಗ್ಗೆ 10ರಂದು ಗುದ್ದಲಿ ಪೂಜೆ ನೆರವೇರಿಸಲಾಗುತ್ತದೆ. ಈ ವೇಳೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್.ರಂಗಪ್ಪ ಉಪಸ್ಥಿತರಿರುವರು.
82ನೇ ವರ್ಷದ ಈ ಸಂಗೀತೋತ್ಸವವು ಏ.2ರಿಂದ ಮೇ 2ರವರೆಗೆ ನಡೆಯಲಿದೆ. ಖ್ಯಾತ ಸಂಗೀತ ವಿದ್ವಾಂಸರು ಕಾರ್ಯಕ್ರಮ ಪ್ರಸ್ತುತಪಡಿಸಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.