ಬೆಂಗಳೂರು: ವಿಶ್ವ ಹೃದಯ ದಿನಾಚರಣೆ ಅಂಗವಾಗಿ ತಥಾಗತ್ ಹಾರ್ಟ್ ಕೇರ್ ಹಾಸ್ಪಿಟಲ್ ಶನಿವಾರ ನಗರದಲ್ಲಿ ಹಮ್ಮಿಕೊಂಡಿದ್ದ ವಾಕಥಾನ್ನಲ್ಲಿ ನೂರಾರು ಜನರು ‘ಹೃದಯದ ಆರೋಗ್ಯಕ್ಕಾಗಿ’ ಹೆಜ್ಜೆ ಹಾಕಿದರು.
ಸ್ವತಂತ್ರ ಉದ್ಯಾನದಲ್ಲಿ ವಾಕಥಾನ್ಗೆ ಚಾಲನೆ ನೀಡಿದ ಸಚಿವರಾದ ದಿನೇಶ್ ಗುಂಡೂರಾವ್ ಮತ್ತು ಸಂತೋಷ್ ಲಾಡ್ ಇತರರೊಂದಿಗೆ ತಾವೂ ಹೆಜ್ಜೆ ಹಾಕಿದರು. ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮಲ್ಲೇಶ್ವರದ ಮಂತ್ರಿ ಮಾಲ್ ಎದುರು ಸಮಾವೇಶಗೊಂಡಿತು.
ಹೃದಯ ಆರೋಗ್ಯ ರಕ್ಷಣೆ ಕುರಿತು ದಾರಿಯುದ್ದಕ್ಕೂ ಘೋಷಣೆ ಮೊಳಗಿದವು. ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು ಜಾಗೃತಿ ಮೂಡಿಸುವ ಭಿತ್ತಿಫಲಕ, ಚಿತ್ರಗಳನ್ನು ಪ್ರದರ್ಶಿಸಿದರು.
ಹೃದಯ ಮನುಷ್ಯನ ಜೀವಂತಿಕೆ ಸಂಕೇತ. ಹೃದಯದ ಬಡಿತದೊಂದಿಗೆ ಶುರುವಾಗುವ ಜೀವನ ಹೃದಯದ ಸದ್ದು ನಿಲ್ಲುವುದರೊಂದಿಗೆ ಕೊನೆಯಾಗುತ್ತದೆ. ಜೀವನಶೈಲಿಯಲ್ಲಿ ಮಾಡಿಕೊಳ್ಳುವ ಸಣ್ಣಪುಟ್ಟ ಬದಲಾವಣೆ ಹೃದಯ ಮತ್ತು ಬದುಕನ್ನು ಜೋಪಾನವಾಗಿಡುತ್ತವೆ. ಬೇರೆಯವರಿಗಾಗಿ ಮಿಡಿಯುವ ಹೃದಯ ತನ್ನ ಆರೋಗ್ಯಕ್ಕೂ ಮಿಡಿಯುವಂತಾಗಲಿ ಎಂದು ತಥಾಗತ್ ಆಸ್ಪತ್ರೆಯ ಮುಖ್ಯಸ್ಥ ಡಾ.ಮಹಾಂತೇಶ್ ಆರ್. ಚರಂತಿಮಠ ಆಶಿಸಿದರು.
ಮಾಜಿ ಶಾಸಕಿ ಸೌಮ್ಯಾ ರೆಡ್ಡಿ, ಎಂ.ಪಿ ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷೆ ವೀಣಾ ಮಹಾಂತೇಶ್, ಊರ್ಮಿಳಾ ಕಳಸದ, ಮಹಾರಾಣಿ ಕಾಲೇಜು ವಿದ್ಯಾರ್ಥಿನಿಯರು, ಭಾರತ ಸೇವಾ ದಳ ಶಾಲೆಯ ಮಕ್ಕಳು, ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು, ಸಂಘ, ಸಂಸ್ಥೆಯ ಪ್ರತಿನಿಧಿಗಳು ಮತ್ತು ತಥಾಗತ್ ಆಸ್ಪತ್ರೆಯ ಸಿಬ್ಬಂದಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.