ಬೆಂಗಳೂರು: ‘ಬಹು ಭಾಷೆಗಳನ್ನು ಹೊಂದಿರುವ ದೇಶದಲ್ಲಿ ಭಾಷಾ ಅಸಮಾನತೆ ತಾಂಡವವಾಡುತ್ತಿದೆ. ಇದನ್ನು ನಿವಾರಿಸಿ ಎಲ್ಲ ಭಾಷೆಗಳಿಗೂ ಸಮಾನ ಅವಕಾಶ ಕಲ್ಪಿಸಿದರೆ ದೇಶವು ಇನ್ನಷ್ಟು ಬಲಿಷ್ಠವಾಗಬಲ್ಲುದು’ ಎಂದು ಕನ್ನಡ ಪರ ಹೋರಾಟಗಾರ ಆನಂದ್ ಅಭಿಪ್ರಾಯಪಟ್ಟರು.
ವಿಶ್ವ ತಾಯ್ನುಡಿ ದಿನದ ಅಂಗವಾಗಿ ಬನವಾಸಿ ಬಳಗದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಭಾಷಾ ಸಮಾನತೆಗಾಗಿ ನಡೆದ ಹೋರಾಟ ಹತ್ತಿಕ್ಕಲು 1952ರಲ್ಲಿ ಢಾಕಾದಲ್ಲಿ ನಡೆದ ಗೋಲಿಬಾರ್ನಲ್ಲಿ ನಾಲ್ವರು ವಿದ್ಯಾರ್ಥಿಗಳು ಅಸುನೀಗಿದರು. ಅವರ ಬಲಿದಾನದ ಸ್ಮರಣಾರ್ಥ ಯುನೆಸ್ಕೊ 2000ದಿಂದ ಫೆ.21ರಂದು ವಿಶ್ವ ತಾಯ್ನುಡಿ ದಿನವನ್ನು ಆಚರಿಸುತ್ತಾ ಬರುತ್ತಿದೆ. ’ ಎಂದರು.
‘ಪಾಕಿಸ್ತಾನದಲ್ಲಿ 1948ರಲ್ಲಿ ಉರ್ದುವನ್ನು ರಾಷ್ಟ್ರ ಭಾಷೆಯೆಂದು ಘೋಷಿಸಲಾಯಿತು. ಬಂಗಾಳಿ ಭಾಷೆ ಬಳಸುತ್ತಿದ್ದ ಪೂರ್ವ ಪಾಕಿಸ್ತಾನದಲ್ಲಿ (ಬಾಂಗ್ಲಾ) ಇದಕ್ಕೆ ಪ್ರತಿರೋಧ ವ್ಯಕ್ತವಾಯಿತು. ಕಲಿಕೆಯಲ್ಲಿ ಹಾಗೂ ನೋಟುಗಳಲ್ಲಿ ಬಂಗಾಳಿ ಭಾಷೆಗೂ ಮಾನ್ಯತೆ ಸಿಗಬೇಕು ಎಂಬ ಒತ್ತಾಯ ಕೇಳಿಬಂತು. ವಿದ್ಯಾವಂತ ಬಂಗಾಳಿಗಳು ಉದ್ಯೋಗ ವಂಚಿತರಾಗುತ್ತಾರೆ ಎಂಬ ಕೂಗೆದ್ದಿತು. ಇದು ಭಾಷಾ ಆಧಾರದಲ್ಲಿ ಪಾಕಿಸ್ತಾನ ವಿಭಜನೆ ಹೊಂದುವುದಕ್ಕೆ ನಾಂದಿ ಹಾಡಿತು’ ಎಂದು ಅವರು ವಿವರಿಸಿದರು.
‘ಹಿಂದಿ ಹೇರಿಕೆಯಿಂದ ಬಾಂಗ್ಲಾ ಎದುರಿಸಿದಂತಹ ಪರಿಸ್ಥಿತಿಯನ್ನೇಭಾರತದ ಭಾಷೆಗಳೂ ಎದುರಿಸುತ್ತಿವೆ.ಹಿಂದಿ ಹೇರಿಕೆ ಭಾರತದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯನ್ನುಂಟು ಮಾಡಲಿದೆ’ ಎಂದು ಎಚ್ಚರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.