ADVERTISEMENT

ಭಾರತಕ್ಕೆ ವಿಶ್ವದ ಮೆಚ್ಚುಗೆ: ಬಿ.ಎಲ್.ಸಂತೋಷ್

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2020, 22:39 IST
Last Updated 30 ಏಪ್ರಿಲ್ 2020, 22:39 IST
ಬಿ.ಎಲ್.ಸಂತೋಷ್
ಬಿ.ಎಲ್.ಸಂತೋಷ್   

ಬೆಂಗಳೂರು: ‘ಕೋವಿಡ್‌–19 ತಡೆಗಟ್ಟಲು ಭಾರತ ಕೈಗೊಂಡ ಕಠಿಣ ಕ್ರಮಗಳಿಗೆ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಲಾಕ್‌ಡೌನ್‌, ಕ್ವಾರಂಟೈನ್‌, ರೋಗ ತಪಾಸಣೆ, ವೈರಸ್ ಹರಡುವಿಕೆ ತಡೆ ಮತ್ತು ಚಿಕಿತ್ಸೆಯ ವಿಚಾರದಲ್ಲಿಭಾರತ ಇತರ ದೇಶಗಳಿಗಿಂತಲೂ ಮುಂಚೂಣಿಯಲ್ಲಿದೆ’ ಎಂದು ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ ಹೇಳಿದ್ದಾರೆ.

‘ಪ್ರಜ್ಞಾ ಪ್ರವಾಹ’ ಕರ್ನಾಟಕ ಘಟಕ ಗುರುವಾರ ಏರ್ಪಡಿಸಿದ್ದ, ‘ಕೊರೊನಾ ವಿರುದ್ಧ ಭಾರತದ ಹೋರಾಟ ಮತ್ತು ಮುಂದೆ ಬರುವ ಸವಾಲುಗಳಿಗೆ ಕೇಂದ್ರ ಸರ್ಕಾರದ ಸನ್ನದ್ಧತೆ’ ವಿಷಯದ ಕುರಿತು ಅವರು ಮಾತನಾಡಿದರು.

‘ಜಗತ್ತಿನ ಬಲಾಢ್ಯ ದೇಶಗಳಾದ ಅಮೆರಿಕ, ಬ್ರೆಜಿಲ್‌, ಸ್ಪೇನ್‌, ಇಟಲಿ, ಲಂಡನ್‌ ಮತ್ತು ಫ್ರಾನ್ಸ್‌ಗಳಲ್ಲಿ ಸೋಂಕಿತರ ಸಂಖ್ಯೆ ಲಕ್ಷ ದಾಟಿದ್ದರೆ, ಭಾರತದಲ್ಲಿ ಮಾರ್ಚ್‌ನಲ್ಲಿ ಸೋಂಕಿತರ ಸಂಖ್ಯೆ 200 ದಾಟಿತ್ತು. ಅದರ ತೀವ್ರತೆ ಅರಿತ ಕೇಂದ್ರ ಸರ್ಕಾರ ದೇಶದೊಳಗೆ ಮಾತ್ರವಲ್ಲದೆ, ಸಾರ್ಕ್‌ ದೇಶಗಳ ನೆರವಿಗೆ ಮುಂದಾಯಿತು. ವಿದೇಶಗಳಲ್ಲಿ ನೆಲೆಸಿದ್ದ ಭಾರತಿಯರನ್ನು ಕರೆತರುವ ಕೆಲಸ ಮಾಡಿತು, ರಾಜ್ಯ ಸರ್ಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೋವಿಡ್‌ ವಿರುದ್ಧ ಸಂಘಟಿತ ಹೋರಾಟಕ್ಕೆ ಸಜ್ಜುಗೊಳಿಸಲಾಯಿತು. ಕೊರೊನಾ ಕಾರಣದಿಂದ ಭಾರತೀಯ ವೈದ್ಯಕೀಯ ಕ್ಷೇತ್ರಗಳಲ್ಲಿ ಅನೇಕ ಸಂಶೋಧನೆಗಳಿಗೆ ಅವಕಾಶ ನೀಡಲಾಗಿದೆ’ ಎಂದರು.

ADVERTISEMENT

‘ಅಪಾಯದತ್ತ ಜಾರುತ್ತಿದೆ ಕೇರಳ’
ಕೋವಿಡ್‌–19 ನಿಯಂತ್ರಣದಲ್ಲಿ ‘ಕೇರಳ ಮಾದರಿ’ ಅನುಸರಿಸಬೇಕು ಎಂಬ ಚರ್ಚೆ ನಡೆಯುತ್ತಿರುವಾಗಲೇ, ಕೇರಳದಲ್ಲಿ ಕೋವಿಡ್‌ ಪರಿಸ್ಥಿತಿ ಗಂಭೀರವಾಗಿದ್ದು, ಇಡೀ ರಾಜ್ಯವೇ ಅಪಾಯಕಾರಿ ಸ್ಥಿತಿಯತ್ತ ಜಾರುತ್ತಿದೆ ಎಂದು ಬಿ.ಎಲ್‌.ಸಂತೋಷ್ ಆತಂಕ ವ್ಯಕ್ತಪಡಿಸಿದ್ದಾರೆ.

ಇಡುಕ್ಕಿ, ಕೊಟ್ಟಾಯಂ, ಕೊಲ್ಲಂ, ತಿರುವನಂತಪುರಂ ಜಿಲ್ಲೆಗಳಲ್ಲಿ ಕೋವಿಡ್‌ನ ಹೊಸ ಪ್ರಕರಣಗಳು ವರದಿಯಾಗಿವೆ. ಬಹುತೇಕ ಇಡೀ ರಾಜ್ಯವೇ ಕೆಂಪು ವಲಯವಾಗಿ ಪರಿವರ್ತನೆಗೊಂಡಿದೆ ಎಂದು ಹೇಳಿದ್ದಾರೆ.

ಆರಂಭದಲ್ಲಿ ಕೇರಳ ಸರ್ಕಾರ ಘೋಷಿಸಿದ್ದ ₹20,000 ಕೋಟಿ ಪ್ಯಾಕೇಜ್ ಗಾಳಿಯಲ್ಲಿ ತೂರಿ ಹೋಗಿದೆಯೇ? ಸರ್ಕಾರಿ ನೌಕರರ ಸಂಬಳವನ್ನು ತಡೆ ಹಿಡಿದಿದೆ. ಈ ರೀತಿ ಸಂಬಳ ತಡೆ ಹಿಡಿದಿರುವ ಮೊದಲ ರಾಜ್ಯ ಕೇರಳ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.