ಚೌಡೇಶ್ವರಿ ಬಡಾವಣೆ ಸುತ್ತಮುತ್ತಲಿನ ರಸ್ತೆಗಳ ದುಸ್ಥಿತಿ
ರಾಜರಾಜೇಶ್ವರಿನಗರ: ಕ್ಷೇತ್ರದ ಲಗ್ಗೆರೆ ವಾರ್ಡ್ ವ್ಯಾಪ್ತಿಯ ಚೌಡೇಶ್ವರಿನಗರದ ಬಿ.ಬೆಸ್ಟ್ ಶಾಲೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ರಸ್ತೆಗಳು ಅಭಿವೃದ್ದಿಯಾಗದೇ, ಚರಂಡಿ ವ್ಯವಸ್ಥೆ ಸರಿಯಾಗಿಲ್ಲದೇ ನಾಗರಿಕರು ನರಕಯಾತನೆ ಅನುಭವಿಸುತ್ತಿದ್ದಾರೆ.
ಚರಂಡಿ ವ್ಯವಸ್ಥೆಯಿಲ್ಲದ ಕಾರಣ, ಮಳೆ ಬಂದಾಗ ನೀರು ಮನೆಗಳಿಗೆ ನುಗ್ಗುತ್ತದೆ. ಮಳೆ ನೀರಿನೊಂದಿಗೆ ಮಣ್ಣು, ಕಲ್ಲುಗಳು ಕೊಚ್ಚಿಕೊಂಡು ಮನೆ ಅಂಗಳ ಸೇರುತ್ತವೆ’ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.
ಬಡವರು, ಕೂಲಿ ಕಾರ್ಮಿಕರು, ಸಣ್ಣ ಕೈಗಾರಿಕೆಗಳಲ್ಲಿ ದುಡಿಯುವ ವರ್ಗದವರೆ ಹೆಚ್ಚಾಗಿ ವಾಸಿಸುವ ಈ ಬಡಾವಣೆಗೆ ಮೂಲಸೌಕರ್ಯ ಕಲ್ಪಿಸುವ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ತತ್ಸಾರ ಮಾಡುತ್ತಿದ್ದಾರೆ. ಬಿಡಿಎ ಬಡಾವಣೆ, ಖಾಸಗಿ ಬಡಾವಣೆಗಳಿಗೆ ತೋರುವ ಆಸಕ್ತಿಯನ್ನು ಬಡವರು ವಾಸಿಸುವ ಬಡಾವಣೆಗೆ ತೋರುವುದಿಲ್ಲ’ ಎಂದು ನಿವಾಸಿ ವಸಂತ ಆಕ್ರೋಶ ವ್ಯಕ್ತಪಡಿಸಿದರು.
‘ಹಲವು ವರ್ಷಗಳಿಂದ ನಮ್ಮ ಬಡಾವಣೆ ರಸ್ತೆಗೆ ಡಾಂಬರೀಕರಣ ಮಾಡಿಲ್ಲ. ಚರಂಡಿ ವ್ಯವಸ್ಥೆಯೂ ಇಲ್ಲ. ಮಳೆ ಬಂದಾಗ ರಸ್ತೆ ಕೆಸರು ಗದ್ದೆಯಂತಾಗುತ್ತದೆ. ಬೇಸಿಗೆಯಲ್ಲಿ ದೂಳು ತುಂಬುತ್ತದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.
2010ರಿಂದ ಇಲ್ಲಿ ಮನೆಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದೇವೆ. ವಾರಕ್ಕೊಮ್ಮೆ ಕಾವೇರಿ ನೀರು ಬರುತ್ತದೆ. ಐದು ದಿನಕ್ಕೊಮ್ಮೆ ಬೋರ್ವೆಲ್ ನೀರು ಸಿಗುತ್ತದೆ. ಹಲವು ವರ್ಷಗಳ ಹಿಂದೆ ಒಳಚರಂಡಿ ವ್ಯವಸ್ಥೆ ಮಾಡಿದ್ದಾರೆ. ಆದರೆ ರಸ್ತೆ ಹಾಳಾಗಿದೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಸೋಮಶೇಖರ್.
‘ಈ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮಾಹಿತಿ ಇದೆ. ಈ ವರ್ಷದ ಕ್ರಿಯಾ ಯೋಜನೆಯ ಮೂಲಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು’ ಎಂದು ಆರ್.ಆರ್.ನಗರ ಕ್ಷೇತ್ರದ ಕಾರ್ಯಪಾಲಕ ಎಂಜಿನಿಯರ್ ಪಾಪರೆಡ್ಡಿ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.