ಬೆಂಗಳೂರು: ‘ಸಾಹಿತಿಗಳು ರಾಜಕೀಯ ಪಕ್ಷಗಳ ವಕ್ತಾರರಂತೆ ವರ್ತಿಸಬಾರದು. ರಾಜಕೀಯ ಪ್ರಜ್ಞೆ ಎಂದರೆ ರಾಜಕೀಯ ಪಕ್ಷದ ಪರ ಪ್ರಜ್ಞೆ ಎಂದು ತಿಳಿಯಬಾರದು’ ಎಂದು ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಹೇಳಿದರು.
ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಜಾಲತಾಣಕ್ಕೆ ಇಲ್ಲಿ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಇತ್ತೀಚೆಗೆ ಜಾತಿಗೊಂದು ಸತ್ಯ, ಪಕ್ಷಕ್ಕೊಂದು ಸತ್ಯ ಎಂಬಂತಾಗಿದೆ. ಈ ಸಂದರ್ಭದಲ್ಲಿ ಲೇಖಕರು ಹಾಗೂ ಪ್ರಕಾಶಕರು ಪ್ರಜಾ ಪರ ಪ್ರಜ್ಞೆ ಹೊಂದುವುದು ಮುಖ್ಯ’ ಎಂದರು.
‘ಜನರಲ್ಲಿ ಪುಸ್ತಕ ಸಂಸ್ಕಾರ ಬೆಳೆಸಬೇಕು ಎಂಬ ಉದ್ದೇಶ ಸರ್ಕಾರಕ್ಕೆ ಇದ್ದರೆ ಈ ಬಾರಿಯ ಬಜೆಟ್ನಲ್ಲಿ ಗ್ರಂಥಾಲಯಗಳ ಸಗಟು ಪುಸ್ತಕ ಖರೀದಿಗೆ ಅನುದಾನ ಮೀಸಲಿಡಬೇಕು’ ಎಂದು ಒತ್ತಾಯಿಸಿದರು.
‘ಈವರೆಗೆ ಯಾವುದೇ ಸರ್ಕಾರವೂ ಪ್ರಕಾಶಕರ ಪರವಾಗಿಲ್ಲ. ಅನುದಾನ ನೀಡುತ್ತೇವೆ ಎನ್ನುತ್ತಾರೆ. ಆದರೆ, ಈವರೆಗೆ ಅದು ಅನುಷ್ಠಾನಗೊಂಡಿಲ್ಲ’ ಎಂದರು.
ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ‘ಇತ್ತೀಚಿನ ದಿನಗಳಲ್ಲಿ ಪುಸ್ತಕ ಪ್ರಕಾಶಕರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಪುಸ್ತಕ ಪ್ರಕಾಶನಕ್ಕೂ ನಿಯಮಾವಳಿ ರೂಪಿಸುವ ಅಗತ್ಯವಿದೆ’ ಎಂದರು.
ಪ್ರಶಸ್ತಿ ಪ್ರದಾನ:ಹೇಮಂತ ವರ್ಷದ ಲೇಖಕ ಪ್ರಶಸ್ತಿಯನ್ನು ಡಾ.ಸಿ.ಚಂದ್ರಪ್ಪ, ಸಪ್ನ ವರ್ಷದ ಯುವ ಲೇಖಕ ಪ್ರಶಸ್ತಿಯನ್ನು ಕಪಿಲ.ಪಿ. ಹುಮನಾಬಾದ, ಕಣ್ವ ವರ್ಷದ ಪ್ರಕಾಶಕ ಪ್ರಶಸ್ತಿಯನ್ನು ಪ್ರಕಾಶ್ ಕಂಬತ್ತಳ್ಳಿ ಅವರಿಗೆ ಪ್ರದಾನ ಮಾಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.