‘ಯಕ್ಷಚಂದ್ರ’ ಪುಸ್ತಕ ಜನಾರ್ಪಣೆ ಮತ್ತು ‘ಶರಸೇತು ಬಂಧನ’ ಯಕ್ಷಗಾನ ಪ್ರದರ್ಶನದ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ, ಪತ್ನಿ ಚೇತನಾ ಹೆಗಡೆ, ಪುತ್ರಿ ಅಶ್ವಿನಿ ಅವರನ್ನು ಗೌರವಿಸಲಾಯಿತು.
ಪ್ರಜಾವಾಣಿ ಚಿತ್ರ
ಬೆಂಗಳೂರು: ಯಕ್ಷಗಾನ ಕಲೆಯನ್ನು ಮುಂದಿನ ಪೀಳಿಗೆಗೂ ತಲುಪಿಸಬೇಕೆಂದರೆ ಈಗಿನಿಂದಲೇ ಸಂಪೂರ್ಣ ದಾಖಲೀಕರಣ ಮಾಡುವುದು ಒಳ್ಳೆಯದು ಎಂದು ಕಲಾವಿದ ಬಳ್ಕೂರು ಕೃಷ್ಣಯಾಜಿ ಸಲಹೆ ನೀಡಿದರು.
ನಗರದಲ್ಲಿ ಭಾನುವಾರ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರ ಜೀವನಗಾಥೆಯ ಪುಸ್ತಕ ‘ಯಕ್ಷಚಂದ್ರ’ ಜನಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಯುವ ಪೀಳಿಗೆಯಲ್ಲಿ ಯಕ್ಷಗಾನದ ಆಸಕ್ತಿ ಕಡಿಮೆಯಾಗುತ್ತಿದೆ. ಮುಂದಿನ ಪೀಳಿಗೆಯ ಹೊತ್ತಿಗೆ ಇದು ಇನ್ನೂ ಕ್ಷೀಣಿಸಬಹುದು. ಈ ಕಾರಣದಿಂದ ಯಕ್ಷಗಾನ ಪ್ರದರ್ಶನಗಳ ಜತೆಗೆ ಕಲೆ, ಕಲಾವಿದರ ಕುರಿತು ವೇಷ ಸಹಿತವಾಗಿ ದಾಖಲು ಮಾಡುವುದು ಸೂಕ್ತ ಎಂದು ಹೇಳಿದರು.
ಶಿಕ್ಷಣ ತಜ್ಞ ಕೆ.ಈ. ರಾಧಾಕೃಷ್ಣ ಮಾತನಾಡಿ, ‘ಕೊಂಡದಕುಳಿ ಅನೇಕ ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ. ಕಲೆ ಎಂದಿಗೂ ನಿಂತ ನೀರಾಗಬಾರದು. ಹರಿಯುವ ನೀರಿನಂತೆ ಮುಂದಿನ ಪೀಳಿಗೆಗೆ ತಲುಪಲು ಹೊಸ ಪ್ರಯೋಗಗಳನ್ನು ಆಧುನೀಕತೆ ಹಾಗೂ ಸಂಪ್ರದಾಯದ ಜತೆಯಲ್ಲಿ ಮಾಡಬೇಕು’ ಎಂದು ಸಲಹೆ ನೀಡಿದರು.
ಸನ್ಮಾನ ಸ್ವೀಕರಿಸಿದ ಕೊಂಡದಕುಳಿ ರಾಮಚಂದ್ರ ಹೆಗಡೆ ಮಾತನಾಡಿ, ‘ಯಕ್ಷಗಾನದ ಕುರಿತು ಹಿರಿಯ ಕಲಾವಿದರು ಹೇಳಿದ್ದೆಲ್ಲ ಸತ್ಯ ಎಂದು ಹೇಳಲಾಗದು. ಎಲ್ಲವನ್ನೂ ವಿಮರ್ಶೆ ಮಾಡುತ್ತಲೇ ಅರಿವನ್ನು ವಿಸ್ತರಿಸಿಕೊಳ್ಳಬೇಕು. ಕಿರಿಯರಿಗೂ ಸರಿಯಾಗಿ ಮಾರ್ಗದರ್ಶನ ಮಾಡಬೇಕು’ ಎಂದು ನುಡಿದರು.
ಪತ್ರಕರ್ತ ಕೆ.ರವಿಶಂಕರ್ ಭಟ್, ಲೇಖಕ ರಾಘವೇಂದ್ರ ಭಟ್, ಕಲಾವಿದರಾದ ಮೋಹನ್ ಹೆಗಡೆ, ಶ್ರೀಪಾದ್ ಹೆಗಡೆ, ದೀಪಕ್ ಶೆಟ್ಟಿ ಸತ್ಯವತಿ, ಉದ್ಯಮಿ ಅಜಿತ್ ಹೆಗ್ಡೆ ಶಾನಾಡಿ ಹಾಜರಿದ್ದರು. ಬಳಿಕ ಶರಸೇತು ಬಂಧನ ಯಕ್ಷಗಾನ ಪ್ರದರ್ಶನ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.