ಯಲಹಂಕ: ಕ್ಷೇತ್ರ ವ್ಯಾಪ್ತಿಯಲ್ಲಿ ಬಡವರಿಗಾಗಿ ವರ್ಷದೊಳಗೆ 10 ಸಾವಿರ ಮನೆಗಳನ್ನು ವಿತರಿಸುವ ಗುರಿ ಇದ್ದು, ಈಗಾಗಲೆ 4 ಕಡೆ ಭೂಮಿಪೂಜೆ ನೆರವೇರಿಸಿ ಕಟ್ಟಡಗಳ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಹೇಳಿದರು.
ತಾಲ್ಲೂಕು ಕಚೇರಿಯಲ್ಲಿ ಕಂದಾಯ ಇಲಾಖೆ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ 94ಸಿಸಿ ಅಡಿಯಲ್ಲಿ ಕಾಯಂ ಹಕ್ಕುಪತ್ರ ಹಾಗೂ ವಿವಿಧ ವರ್ಗಗಳ ಜನರಿಗೆ ಪಿಂಚಣಿ ಆದೇಶ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
‘ಯಲಹಂಕ ಮತ್ತು ಹೆಸರಘಟ್ಟ ವ್ಯಾಪ್ತಿಯಲ್ಲಿ ಈ ಹಿಂದೆಯೇ 94ಸಿಸಿ ಅಡಿಯಲ್ಲಿ 2 ಸಾವಿರ ಹಕ್ಕುಪತ್ರಗಳನ್ನು ನೀಡಲಾಗಿತ್ತು. ಈಗ ಇನ್ನಷ್ಟು ಕುಟುಂಬಗಳಿಗೆ ಹಕ್ಕುಪತ್ರ ನೀಡಿದ್ದರಿಂದ, ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ಯಾವುದೇ ದಾಖಲೆಗಳಿಲ್ಲದೆ ಜೀವನ ನಡೆಸುತ್ತಿದ್ದ ಬಡಕುಟುಂಬಗಳ ಆತಂಕ ದೂರವಾಗಿದೆ. ಈ ಜಾಗದ ಮಾಲೀಕರಿಗೆ ಶೀಘ್ರವೇ ಪಂಚಾಯ್ತಿಗಳಲ್ಲಿ ಖಾತಾ ಮಾಡಿಕೊಡಲಾಗುತ್ತದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.