ಯಲಹಂಕ: ಭಾರತೀಯ ತಾಂತ್ರಿಕ ಶಿಕ್ಷಣ ಸಂಸ್ಥೆಯ (ಐಎಸ್ಟಿಇ) ಕೇಂದ್ರನ್ನು ನಗರದ ಏಟ್ರಿಯಾ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ತೆರೆಯಲಾಗಿದೆ. ವಿದ್ಯಾರ್ಥಿಗಳು ಮತ್ತು ಬೋಧಕರ ಕೌಶಲ ವೃದ್ಧಿಸುವ ಕಾರ್ಯವನ್ನು ಈ ಕೇಂದ್ರ ಮಾಡಲಿದೆ.
ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಐಎಸ್ಟಿಇ ಅಧ್ಯಕ್ಷ ಡಾ. ಪ್ರತಾಪ್ ದೇಸಾಯಿ, ‘ಜೀವನದಲ್ಲಿ ಎಂಜಿನಿಯರ್ ಆಗಬೇಕೆಂದು ಬಯಸುವ ವಿದ್ಯಾರ್ಥಿಯು ಭವಿಷ್ಯದಲ್ಲಿ ಉದ್ಯೋಗ ಸೃಷ್ಟಿಕರ್ತನಾಗಬೇಕೇ ಹೊರತು, ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡುವಂತಾಗಬಾರದು. ನಿಮ್ಮ ಸ್ವ-ಇಚ್ಛೆಯಿಂದ ಎಂಜಿನಿಯರ್ ಆಗಬೇಕೇ ವಿನಾ ಯಾರದೋ ಒತ್ತಾಯಕ್ಕೆ ಕಟ್ಟುಬಿದ್ದು ಎಂಜಿನಿಯರ್ ಆಗಬೇಡಿ’ ಎಂದರು.
‘ಭಾರತವು 40 ವರ್ಷಗಳಿಂದಲೂ ವಿಶ್ವದ ಮುಂಚೂಣಿ ದೇಶಗಳೊಂದಿಗೆ ಸ್ಪರ್ಧೆ ಮಾಡುತ್ತಾ ಬಂದಿದೆ. ಈ ಅವಧಿಯಲ್ಲಿ ಸಾಕಷ್ಟು ಬದಲಾವಣೆ ಮತ್ತು ಬೆಳವಣಿಗೆಗಳಾಗಿದ್ದು, ಮುಂದಿನ 10 ವರ್ಷಗಳಲ್ಲಿ ಮುಂಚೂಣಿಯಲ್ಲಿರುವ ಜಗತ್ತಿನ ಎಲ್ಲ ಕಂಪನಿಗಳ ಕಚೇರಿಗಳು ಭಾರತದಲ್ಲಿರುತ್ತವೆ’ ಎಂದು ತಿಳಿಸಿದರು.
ಐಎಸ್ಟಿಇ ಕರ್ನಾಟಕ ವಿಭಾಗದ ಅಧ್ಯಕ್ಷ ಡಾ. ಡಿ.ಎಸ್. ಸುರೇಶ್, ‘ಭಾರತದ ಶಿಕ್ಷಣದ ನೀತಿಯಲ್ಲಿರುವ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವಲ್ಲಿ ನಾವು ಎಡವುತ್ತಿದ್ದೇವೆ. ಶೇ.17 ರಷ್ಟು ವಿದ್ಯಾರ್ಥಿಗಳು ಮಾತ್ರ ಉದ್ಯೋಗಕ್ಕೆ ಯೋಗ್ಯರಾಗಿದ್ದರೆ, ಇನ್ನುಳಿದ ಶೇ.83ರಷ್ಟು ವಿದ್ಯಾರ್ಥಿಗಳು ಕಂಪನಿಗಳ ನಿರೀಕ್ಷೆಗೆ ತಕ್ಕಂತೆ ಸಿದ್ಧರಾಗಿರುವುದಿಲ್ಲ. ಈ ಅಂತರವನ್ನು ಸರಿಪಡಿಸಬೇಕು’ ಎಂದು ತಿಳಿಸಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಗಣಕಯಂತ್ರ ವಿಭಾಗದಲ್ಲಿ 10ನೇ ರ್ಯಾಂಕ್ ಪಡೆದ ಸುಪ್ರಿತಾ ಎಸ್.ರಾವ್ ಸೇರಿದಂತೆ ಶೈಕ್ಷಣಿಕವಾಗಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಏಟ್ರಿಯಾ ತಾಂತ್ರಿಕ ಶಿಕ್ಷಣಸಂಸ್ಥೆಯ ತಾಂತ್ರಿಕ ನಿರ್ದೇಶಕ ಡಾ. ಕೌಶಿಕ್ ರಾಜು, ವ್ಯವಸ್ಥಾಪಕ ಟ್ರಸ್ಟಿ ಕೆ.ನಾಗರಾಜು, ಡಾ.ಸಂಗಪ್ಪ, ಪ್ರಾಚಾರ್ಯ ಡಾ.ಟಿ.ಎನ್.ಶ್ರೀನಿವಾಸ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.