
ಸಾವು
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಗೋದಾಮಿನಲ್ಲಿ ಕೆಲಸ ಮಾಡಿಕೊಂಡಿದ್ದ ಯುವಕನೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಈ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿದ್ದಾಪುರ ನಿವಾಸಿ ಅಬ್ದುಲ್ ಹುಸೇನ್(30) ಮೃತ ಯುವಕ. ಘಟನೆ ಸಂಬಂಧ ಮೃತ ಯುವಕನ ಪೋಷಕರು ದೂರು ನೀಡಿದ್ದಾರೆ. ದೂರು ಆಧರಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಸಿದ್ದಾಪುರದ ನಿವಾಸಿ ಅಬ್ದುಲ್ ಹುಸೇನ್ ಅವರು ಮಾವನ ಪುತ್ರಿಯನ್ನು ಪ್ರೀತಿಸುತ್ತಿದ್ದರು. ಪುತ್ರಿ ಮದುವೆ ಮಾಡಿಕೊಡುವಂತೆ ಮಾವನ ಬಳಿ ಹುಸೇನ್ ಮನವಿ ಮಾಡಿದ್ದರು. ಅದಕ್ಕೆ ಮಾವ ಒಪ್ಪಿರಲಿಲ್ಲ. ಈ ಮಧ್ಯೆ ಆರು ತಿಂಗಳ ಹಿಂದೆ ಕುಟುಂಬ ಸಮೇತರಾಗಿ ಮಾವ ಅಂದ್ರಹಳ್ಳಿಗೆ ಸ್ಥಳಾಂತರಗೊಂಡಿದ್ದರು. ಗೋದಾಮು ಬಾಡಿಗೆ ಪಡೆದು ಗುಜರಿ ವ್ಯಾಪಾರ ಮಾಡುತ್ತಿದ್ದರು. ಇತ್ತೀಚೆಗೆ ಆ ಗೋದಾಮಿಗೆ ಬೆಂಕಿ ಬಿದ್ದು ನಷ್ಟವಾಗಿತ್ತು. ಅದಾದ ಮೇಲೆ ಯುವಕ, ಮಾವನ ಜತೆಗೆ ಸೇರಿಕೊಂಡು ಗುಜರಿ ವ್ಯಾಪಾರ ಆರಂಭಿಸಿದ್ದರು. ಈ ನಡುವೆ ಪುತ್ರಿಯನ್ನು ಮದುವೆ ಮಾಡಿಕೊಡುವಂತೆ ಯುವಕ ಮತ್ತೊಮ್ಮೆ ಕೇಳಿಕೊಂಡಿದ್ದರು. ಆಗಲೂ ಮಾವ ಒಪ್ಪಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ: ಗೋದಾಮಿನಲ್ಲಿ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂದು ಪರಿಶೀಲಿಸಿದ್ದಾರೆ.
ಮೃತದೇಹದ ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಮೇಲ್ನೋಟಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡಿರುವಂತೆ ಕಾಣಿಸುತ್ತಿದೆ. ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.