ADVERTISEMENT

ಅಂಚೆ ವಿಮಾ ಗ್ರಾಮ:ಸಲಹೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2011, 8:25 IST
Last Updated 20 ಸೆಪ್ಟೆಂಬರ್ 2011, 8:25 IST

ಬಸವಕಲ್ಯಾಣ: ಅಂಚೆ ನೌಕರರು ತಮ್ಮ ಗ್ರಾಮದಲ್ಲಿನ ಪ್ರತಿ ಮನೆಯಲ್ಲಿನ ಒಬ್ಬರ ಹೆಸರಲ್ಲಿ ಗ್ರಾಮೀಣ ಅಂಚೆ ಜೀವ ವಿಮೆ ಮಾಡಿಸಿ ಗ್ರಾಮಗಳನ್ನು ಸಂಪೂರ್ಣ ವಿಮಾ ಗ್ರಾಮವನ್ನಾಗಿ ಮಾಡಬೇಕು ಎಂದು ಅಂಚೆ ಇಲಾಖೆ ಧಾರವಾಡ ವಲಯದ ಸಹಾಯಕ ನಿರ್ದೇಶಕ ಬಿ.ಆರ್.ನಂಜರಗಿ ಸಲಹೆ ಕೊಟ್ಟರು.

ಇಲ್ಲಿನ ಅಂಚೆ ಕಚೇರಿಯಲ್ಲಿ ಸೋಮವಾರ ನಡೆದ ಗ್ರಾಮೀಣ ಅಂಚೆ ವಿಮೆಯ ಮಾಹಿತಿ ಸಭೆಯಲ್ಲಿ ಮಾತನಾಡಿದರು.

ಅನ್ಯ ಕಂಪೆನಿಗಳ ಜೀವ ವಿಮೆ ಯೋಜನೆ ಕೇವಲ ಶ್ರೀಮಂತರಿಗಾಗಿ ಇದ್ದರೆ ಅಂಚೆ ಇಲಾಖೆಯ ಯೋಜನೆ ಗ್ರಾಮೀಣ ಜನರ ಭದ್ರತೆಗಾಗಿ ಇದೆ. ಅಂಚೆ ಯೋಜನೆಗಳಲ್ಲಿ ಕಡಿಮೆ ಕಂತುಗಳಲ್ಲಿ ಹಣ ತೊಡಗಿಸಿ ಹೆಚ್ಚಿನ ಹಣ ಪಡೆದುಕೊಳ್ಳಬಹುದು. ಗ್ರಾಮಸ್ಥರಿಂದ ಠೇವಣಿ ಹಣ ಸಹ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಿ ಬಚತ್ ಗ್ರಾಮಗಳನ್ನಾಗಿಯೂ ಮಾಡಬೇಕು ಎಂದರು.

ಅಂಚೆ ನೌಕರರಿಗೆ ಈಗ ಪತ್ರ ಬಟವಾಡೆ ಕೆಲಸ ಇಲ್ಲವಾದ್ದರಿಂದ ವಿಮೆ ಮಾಡಿಸಿ ತನ್ನ ಸಂಬಳವನ್ನು ಹೆಚ್ಚಿಗೆ ಮಾಡಿಕೊಳ್ಳಬೇಕು. ಆದಾಯವಿಲ್ಲದ ಅಂಚೆ ಕಚೇರಿಗಳನ್ನು ಬೇರೆಡೆ ವರ್ಗಾಯಿಸಲು ಸರ್ಕಾರ ಯೋಚಿಸುತ್ತಿರುವ ಕಾರಣ ಇಂದಿನಿಂದಲೇ ಕಾರ್ಯಪ್ರವೃತ್ತರಾಗಿ ಆಯಾ ಸ್ಥಳದಲ್ಲಿಯೇ ಅಂಚೆ ಕಚೇರಿ ಉಳಿಯುವಂತೆ ಮಾಡಬೇಕು ಎಂದರು.

ಇಲಾಖೆ ಜಿಲ್ಲಾ ಅಧೀಕ್ಷಕ ಜಗನ್ನಾಥರಾವ ಮಾತನಾಡಿ ಪ್ರತಿ ಅಂಚೆ ಕಚೇರಿಗೆ ಶೇ 33 ರಷ್ಟಾದರೂ ಆದಾಯ ಇರಬೇಕು. ಆದರೆ ಈಚೆಗೆ ಆಧುನಿಕ ಸೌಲಭ್ಯಗಳ ಕಾರಣ ಅಂಚೆ ಚೀಟಿ ಮತ್ತು ಎಂ.ಒ ಮಾಡಿಸುವುದು ಕಡಿಮೆಯಾಗಿ ಅಂಚೆಯಣ್ಣನಿಗೆ ಕೆಲಸವೇ ಇಲ್ಲದಂತಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಪ್ರಭುಲಿಂಗಯ್ಯ ಟಂಕಸಾಲಿಮಠ ಮಾತನಾಡಿ ಅಂಚೆ ನೌಕರರು ಪ್ರಾಮಾಣಿಕರಾಗಿ ಸೇವೆ ಸಲ್ಲಿಸುತ್ತಾರೆ. ಅವರ ಸೇವೆಗೆ ತಕ್ಕ ಸಂಬಳ ದೊರೆಯಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಹುಮನಾಬಾದ ಉಪ ವಿಭಾಗದ ಅಂಚೆ ನಿರೀಕ್ಷಕ ಬಸವಣ್ಣಪ್ಪ ಸೊಂತ ಮಾತನಾಡಿದರು. ಬಸವಕಲ್ಯಾಣ ಕಚೇರಿಯ ಪೋಸ್ಟ್‌ಮಾಸ್ಟರ್ ಅಬ್ದುಲ್ ಗನಿ ಚೌಧರಿ, ಈರಪ್ಪ ಉಪಸ್ಥಿತರಿದ್ದರು. ಇಲಾಖೆಯ ಜಿಲ್ಲಾ ಸಂಯೋಜಕ ಕೆ.ಎಸ್.ವರ್ಮಾ ಸ್ವಾಗತಿಸಿದರು. ದಯಾನಂದ ಸ್ವಾಮಿ ನಿರೂಪಿಸಿದರು. ಈ ಸಂದರ್ಭದಲ್ಲಿ ಹೆಚ್ಚಿನ ವಿಮಾ ಪಾಲಿಸಿ ಮಾಡಿಸಿದ ಅಂಚೆ ನೌಕರರಾದ ಪುಂಡಲೀಕ ಕಿಟ್ಟಾ, ರಾಜೇಂದ್ರ ಎಂಜಿನಿಯರಿಂಗ್ ಕಾಲೇಜು ಬಸವಕಲ್ಯಾಣ, ವೀರಭದ್ರಯ್ಯ ಸ್ವಾಮಿ ಅವರಿಗೆ ಬಹುಮಾನ ಕೊಟ್ಟು ಸತ್ಕರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.