ADVERTISEMENT

ಅರಣ್ಯವಿದ್ದರೆ ಉತ್ತಮ ಆರೋಗ್ಯ: ಹುಡೇದ್

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 9:35 IST
Last Updated 7 ಜನವರಿ 2012, 9:35 IST

ಬಸವಕಲ್ಯಾಣ: ಮರ ಬೆಳೆಸುವುದು ಬರೀ ಪರಿಸರದ ಸೌಂದರ್ಯ ಹೆಚ್ಚಿಸಲು ಅಷ್ಟೇ ಅಲ್ಲ; ಅದರಿಂದ ವಾತಾವರಣದಲ್ಲಿ ಮಾಲಿನ್ಯ ಇಲ್ಲದಂತಾಗಿ ಪ್ರಾಣಿ, ಪಕ್ಷಿಗಳಿಗೆ ಉತ್ತಮ ಆರೋಗ್ಯ ದೊರಕುತ್ತದೆ ಎಂದು ಹಿರಿಯ ಉಪನ್ಯಾಸಕ ಶ್ರೀಶೈಲ ಹುಡೇದ್ ಅಭಿಪ್ರಾಯಪಟ್ಟರು.

ಇಲ್ಲಿನ ಶಿವಯೋಗಿ ಸಿದ್ಧರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡ `ಪರಿಸರ ಜಾಗೃತಿ~ ವಿಚಾರಗೋಷ್ಠಿ ಮತ್ತು ಹಸಿರುಪಡೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಮನುಷ್ಯನ ದುರಾಸೆಯ ಫಲದಿಂದಾಗಿ ಈಚೆಗೆ ಅರಣ್ಯ ನಾಶವಾಗುತ್ತಿದೆ. ಇದರಿಂದ ಜೀವಿಗಳ ಮೇಲೆ ಭಯಂಕರ ದುಷ್ಪರಿಣಾಮ ಆಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಮನೆ ಹಾಗೂ ಶಾಲಾ ಕಾಲೇಜುಗಳ ಆವರಣದಲ್ಲಿ ಸಸಿಗಳನ್ನು ನೆಟ್ಟು ಪೋಷಿಸಬೇಕು ಎಂದು ಸಲಹೆ ಕೊಟ್ಟರು.

ಉದ್ಘಾಟನೆ ನೆರವೆರಿಸಿದ ಉಪನ್ಯಾಸಕ ಸಿದ್ಧಣ್ಣ ಮರಪಳ್ಳೆ ಮಾತನಾಡಿ ಮರಗಳ ನಾಶದಿಂದಾಗಿ ಭೂಮಿಯ ಶಾಖ ಹೆಚ್ಚುತ್ತಿದೆ. ಹವಾಮಾನದಲ್ಲಿ ಏರುಪೇರಾಗುತ್ತಿದೆ ಎಂದರು. ಬರೀ ಹಸಿರುಪಡೆ ಸ್ಥಾಪಿಸಿದರೆ ಮಾತ್ರ ಕೆಲಸ ಮುಗಿಯುವುದಿಲ್ಲ. ಜನರಿಗೆ ಮರಗಳನ್ನು ಬೆಳೆಸಲು ಪ್ರೇರೇಪಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಮಂಜುನಾಥ ರಾಯವಾಡೆ ಮಾತನಾಡಿ ಕೈಗಾರಿಕಾಕರಣದಿಂದಾಗಿ ಅರಣ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಆಗುತ್ತಿದೆ ಎಂದರು. ಬಸವರಾಜ ಮಾಲಿಪಾಟೀಲ ಸ್ವಾಗತಿಸಿದರು. ಚೆನ್ನಬಸಪ್ಪ ಶೆಟ್ಟೆಪ್ಪ ನಿರೂಪಿಸಿದರು. ಶಾಂತಲಿಂಗ ಮಠಪತಿ ವಂದಿಸಿದರು. ಯಕೋಕ್ಲಬ್ ಸದಸ್ಯರು, ವಿದ್ಯಾರ್ಥಿಗಳು, ಉಪನ್ಯಾಸಕರು ಪಾಲ್ಗೊಂಡಿದ್ದರು.

ನಾಳೆ ಕಲಖೋರಾ ದೇವಿ ಜಾತ್ರೆ
ಬಸವಕಲ್ಯಾಣ ತಾಲ್ಲೂಕಿನ ಕಲಖೋರಾ ತಾಂಡಾದಲ್ಲಿ ಜನವರಿ 8 ರಿಂದ ಮೂರು ದಿನಗಳವರೆಗೆ  ಜಗನ್ಮಾತೆ ಮರಿಯಮ್ಮ ದೇವಿಯ 128 ನೇ ಜಾತ್ರಾ ಮಹೋತ್ಸವ ನಡೆಯಲಿದೆ.

8 ರಂದು ಸಂಜೆ 4 ಗಂಟೆಗೆ ಧರ್ಮರಾಜ ಪೂಜಾರಿ ಅವರಿಂದ ಧ್ವಜಾರೋಹಣ ನೆರವೆರುತ್ತದೆ. ನಂತರ ರಾತ್ರಿ ಭಜನೆ, ಕೀರ್ತನೆ ನಡೆಯಲಿದೆ.

9 ರಂದು ಬೆಳಿಗ್ಗೆ 6 ಗಂಟೆಗೆ ಗ್ರಾಮದ ಪೊಲೀಸ್ ಪಾಟೀಲರಿಂದ ಎಣ್ಣೆಕೊಡ ಅರ್ಪಣೆ ಕಾರ್ಯಕ್ರಮ ನಡೆಯುತ್ತದೆ. ಮೆರವಣಿಗೆ ನಡೆಸಿ ಎಣ್ಣೆಯನ್ನು ದೇವಸ್ಥಾನಕ್ಕೆ ಅರ್ಪಿಸಲಾಗುತ್ತದೆ. ನಂತರ ದೇವಿಯ ಮಹಾಪೂಜೆ ನಡೆಯುತ್ತದೆ.

ಅಂದು ಸಾಯಂಕಾಲ ಧಾರ್ಮಿಕ ಸಮಾರಂಭ ಏರ್ಪಡಿಸಲಾಗುತ್ತದೆ.  ರಾತ್ರಿ 10 ಗಂಟೆಗೆ ಬಂಜಾರಾ ಭಜನೆ ನಡೆಯುತ್ತದೆ. 10 ರಂದು ಬೆಳಿಗ್ಗೆ ಪಲ್ಲಕ್ಕಿ ಮೆರವಣಿಗೆಯೊಂದಿಗೆ ಜಾತ್ರೆ ಸಮಾರೋಪಗೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.