ADVERTISEMENT

ಅವ್ಯವಹಾರ ಆರೋಪ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 5:00 IST
Last Updated 7 ಸೆಪ್ಟೆಂಬರ್ 2013, 5:00 IST

ಬೀದರ್: ಇಲ್ಲಿಯ ಬಿಎಸ್‌ಎನ್‌ಎಲ್ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಬಿಎಸ್‌ಎನ್‌ಎಲ್ ಕಾಯಂ ಅಲ್ಲದ ನೌಕರರ ಸಂಘದಿಂದ ನಗರದ ಜನವಾಡ ರಸ್ತೆಯಲ್ಲಿ ಇರುವ ಬಿಎಸ್‌ಎನ್‌ಎಲ್ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ನಿಗಮವು ಗುತ್ತಿಗೆ, ಹೊರಗುತ್ತಿಗೆ ಹಾಗೂ ದಿನಗೂಲಿ ಆಧಾರದಲ್ಲಿ ಕೆಲಸ ತೆಗೆದುಕೊಳ್ಳಲು ಆರಂಭಿಸಿದಾಗಿನಿಂದ ಉನ್ನತಾಧಿಕಾರಿಗಳಿಂದ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಹಾಗೂ ಶೋಷಣೆ ನಡೆಯುತ್ತಿದೆ ಎಂದು ಬಿಎಸ್‌ಎನ್‌ಎಲ್ ಮಹಾ ಪ್ರಬಂಧಕರಿಗೆ ಬರೆದ ಪತ್ರದಲ್ಲಿ ಆರೋಪಿಸಿದ್ದಾರೆ.

ಗುತ್ತಿಗೆದಾರರ ಜತೆ ಶಾಮೀಲಾಗಿ ಅವ್ಯವಹಾರ ನಡೆಸಲಾಗುತ್ತಿದೆ. ವಿರೋಧ ವ್ಯಕ್ತಪಡಿಸುವ ಅಧಿಕಾರಿಗಳು, ಕಾಯಂ ಹಾಗೂ ಗುತ್ತಿಗೆ ನೌಕರರಿಗೆ ಕಿರುಕುಳ ಕೊಡಲಾಗುತ್ತಿದೆ ಎಂದು ದೂರಿದ್ದಾರೆ.

ಅವ್ಯವಹಾರ ಕುರಿತು ಜಾಗೃತ ದಳದಿಂದ ತನಿಖೆ ನಡೆಸಬೇಕು. ಜಿಲ್ಲಾ ವ್ಯವಸ್ಥಾಪಕ, ಸಹಾಯಕ ವ್ಯವಸ್ಥಾಪಕರನ್ನು ಅಮಾನತುಗೊಳಿಸಬೇಕು. ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಬಜರಂಗ ರಾಮಣ್ಣ, ಕಾರ್ಯದರ್ಶಿ ಕಲ್ಲಪ್ಪ ಸಿದ್ಧಪ್ಪ, ಖಜಾಂಚಿ ಚಂಗೇಶ್ ಹಾಗೂ ದತ್ತಮ್ಮ ಬುಡ್ಡಣ್ಣ ಅವರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಇ.ಪಿ.ಎಫ್., ಇ.ಎಸ್.ಐ. ಸೌಲಭ್ಯ ತಕ್ಷಣ ಜಾರಿಗೊಳಿಸಬೇಕು.

ಪ್ರತಿ ತಿಂಗಳ 5ನೇ ತಾರಿಖಿನೊಳಗೆ ವೇತನ ಪಾವತಿಸಬೇಕು. ಗುರುತಿನ ಚೀಟಿ ಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಸಂಘದ ಕಾರ್ಯದರ್ಶಿ ಕಲ್ಲಪ್ಪ ಸಿದ್ಧಪ್ಪ, ಪ್ರಮುಖರಾದ ಆರ್.ಪಿ. ರಾಜಾ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.