ADVERTISEMENT

ಉಪ ಲೋಕಾಯುಕ್ತರ ಕಾಲಿಗೆ ಬಿದ್ದ ವ್ಯಕ್ತಿ

​ಪ್ರಜಾವಾಣಿ ವಾರ್ತೆ
Published 12 ಮೇ 2012, 5:25 IST
Last Updated 12 ಮೇ 2012, 5:25 IST

ಬೀದರ್: ಅರ್ಜಿ ಸಲ್ಲಿಸಿ ಒಂದೂವರೆ ತಿಂಗಳಾದರೂ ಟ್ರ್ಯಾಕ್ಟರ್ ಮಾಲಿಕತ್ವ ಬದಲಾವಣೆ ಮಾಡದೇ ಸತಾಯಿಸಲಾಗುತ್ತಿದೆ ಎಂದು ನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿಯ ಕಚೇರಿಗೆ ಶುಕ್ರವಾರ ದಿಢೀರ ಭೇಟಿ ನೀಡಿದ ಉಪ ಲೋಕಾಯುಕ್ತ ಎಸ್.ಬಿ. ಮಜಗೆ ಅವರ ಎದುರು ವ್ಯಕ್ತಿಯೊಬ್ಬರು ಅಳಲು ತೋಡಿಕೊಂಡರು.

ಉಪ ಲೋಕಾಯುಕ್ತರು ಕಡತ ತಪಾಸಣೆ ನಡೆಸುತ್ತಿರುವಾಗಲೇ ಔರಾದ್ ತಾಲ್ಲೂಕಿನ ಮುಸ್ತಾಪುರ ಗ್ರಾಮದ ಬಾಲಾಜಿ ಎಂಬುವರು ಏಕಾಏಕಿ ಅವರ ಕಾಲಿಗೆ ಬಿದ್ದು ಅಳಲಾರಂಭಿಸಿದರು.

`ತಾನು ಹಳೆಯ ಟ್ರ್ಯಾಕ್ಟರ್ ಖರೀದಿಸಿದ್ದು, ಮಾಲಿಕತ್ವ ಬದಲಾವಣೆಗಾಗಿ ಒಂದೂವರೆ ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದೇನೆ. ಇದಕ್ಕಾಗಿ ಪೀಟರ್ ಎಂಬುವರಿಗೆ ದಾಖಲೆ ಮತ್ತು ಹಣ ನೀಡಿದ್ದೇನೆ. ಆದರೂ ಮಾಲಿಕತ್ವ ಬದಲಾವಣೆ ಆಗಿಲ್ಲ~ ಎಂದು ಆಪಾದಿಸಿದರು. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳುವುದಾಗಿ ಉಪಲೋಕಾಯುಕ್ತರು ತಿಳಿಸಿದರು.

ಕಚೇರಿಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿದ ಅವರು, ಕಡತಗಳನ್ನು ಪರಿಶೀಲಿಸಿದರು. ನಿಗದಿತ ಸಮಯದಲ್ಲಿ ವಾಹನ ಚಾಲನಾ ಪರವಾನಗಿ, ನವೀಕರಣ ಮತ್ತಿತರ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತಿದೆಯೇ ಎನ್ನುವುದನ್ನು ಪರಿಶೀಲಿಸಿದರು.

ಉಪ ಲೋಕಾಯುಕ್ತರು ಕಚೇರಿಗೆ ಭೇಟಿ ನೀಡಿದಾಗ ಮೂವರು ಮಧ್ಯವರ್ತಿಗಳು ಅವರ ಕಣ್ಣಿಗೆ ಬಿದ್ದರು. ಅವರ ಕೈಯಲ್ಲಿದ್ದ ವಾಹನ ಚಾಲನಾ ಪರವಾನಗಿ, ಮಾಲಿಕತ್ವ ಬದಲಾವಣೆ ಮತ್ತಿತರ ಅರ್ಜಿಗಳನ್ನು ಪಡೆದ ಅವರು ಈ ಬಗ್ಗೆ ಪರಿಶೀಲನೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿದರು.

ಬೀದರ್ ಲೋಕಾಯುಕ್ತ ಇನ್‌ಸ್ಪೆಕ್ಟರ್ ಆರ್.ಆರ್. ಜಾಗೀರದಾರ್, ಸಿಬ್ಬಂದಿ ಶ್ರೀಕಾಂತ ಸ್ವಾಮಿ, ಶಿವಕುಮಾರ, ರಾಜಾ ಜಮಾದಾರ್, ಪಂಡಿತ ಬಿರಾದಾರ್ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.