ADVERTISEMENT

ಒಒಡಿ ಅನುಮೋದನೆ ಪತ್ರಕ್ಕಾಗಿ ಶಿಕ್ಷಕರ ಸಾಲು!

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 5:57 IST
Last Updated 6 ಸೆಪ್ಟೆಂಬರ್ 2013, 5:57 IST

ಬೀದರ್: `ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಕ್ರಮವಾಗಿ ಮೊದಲು ಶಿಕ್ಷಕರ ಮೇಲಿನ ಇತರೆ ಕೆಲಸ ಕಾರ್ಯಗಳ ಒತ್ತಡ ಕುಗ್ಗಿಸಬೇಕು  ಎಂದು ಜಿಲ್ಲಾ ಪಂಚಾ ಯಿತಿ ಸದಸ್ಯ ಕುಶಾಲ ಪಾಟೀಲ್ ಗಾದಗಿ ಅಭಿಪ್ರಾಯಪಟ್ಟರು.

ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನ ಪ್ರಯುಕ್ತ ನಗರದ ರಂಗಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಬೀದರ್ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಬಿಸಿಯೂಟ, ಹಾಲು ವಿತರಣೆ ಯೋಜನೆಗಳು ಸರಿಯಾಗಿ ನಿರ್ವಹಣೆ ಮಾಡಬೇಕು ಎನ್ನುವುದ ರಲ್ಲಿಯೇ ಶಿಕ್ಷಕರು ಸಮಯ ವ್ಯರ್ಥ ಮಾಡುತ್ತಿದ್ದಾರೆ. ಹೀಗಾಗಿ, ಬೋಧನಾ ಗುಣಮಟ್ಟ ಹೆಚ್ಚಿಸಲು ಒತ್ತು ನೀಡುತ್ತಿಲ್ಲ. ಇತರೆ ಕೆಲಸದ ಒತ್ತಡ ದಿಂದಾಗಿ ಶಿಕ್ಷಕರು ಹಲವಾರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದರು.

ವಿಶೇಷ ತರಬೇತಿ: `ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್, ಗಣಿತ ಹಾಗೂ ವಿಜ್ಞಾನ ವಿಷಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫಲಿತಾಂಶ ಬರುತ್ತಿಲ್ಲ. ಈ ವಿಷಯಗಳ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗುತ್ತದೆ' ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಉಜ್ವಲ್‌ಕುಮಾರ್ ಘೋಷ್ ತಿಳಿಸಿದರು.

`ಶಿಕ್ಷಕರು ತಮ್ಮ ಕರ್ತವ್ಯ ಅರಿತು ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಗುಣಮಟ್ಟ ಶಿಕ್ಷಣ ಒದಗಿಸಲು ಪ್ರಯ ತ್ನಿಸಬೇಕು. ಆಗಮಾತ್ರ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಜಿಲ್ಲೆಯ ಫಲಿತಾಂಶ ಸುಧಾರಣೆ ಆಗುತ್ತದೆ' ಎಂದು ಹೇಳಿದರು.

ಇಂದಿನ ಮಕ್ಕಳಿಗೆ ಆಸಕ್ತಿ ಇರುವ ಕ್ಷೇತ್ರಗಳ ಬಗ್ಗೆ ಉತ್ತಮ ಮಾರ್ಗ ದರ್ಶನ ಮಾಡುವ ಸಾಮರ್ಥ್ಯವನ್ನು ಶಿಕ್ಷಕರು ಬೆಳೆಸಿಕೊಳ್ಳಬೇಕು ಎಂದು ಉಪನ್ಯಾಸ ನೀಡಿದ ಜ್ಞಾನಸುಧಾ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಪ್ರೊ.ಪೂರ್ಣಿಮಾ ಜಾರ್ಜ್ ತಿಳಿಸಿದರು.

ಬೀದರ್ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಅಕ್ಬರ್ ಖಾನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶಿವಮಂಗಲಾ, ಸಾಮಾಜಿಕ ಮತ್ತು ನ್ಯಾಯ ಸಮಿತಿ ಅಧ್ಯಕ್ಷೆ ವಿದ್ಯಾವತಿ ಬುಯ್ಯ, ವಿಶ್ವನಾಥ ಫುಲೇಕರ್, ಜಿಲ್ಲಾ ಪಂಚಾಯಿತಿ ಸದಸ್ಯೆ ರೇಖಾ ಮಲ್ಕಾಪುರೆ, ತಹಶೀಲ್ದಾರ ಕೀರ್ತಿ ಚಾಲಕ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಿ. ಹಣಮಂತಪ್ಪ, ನಿವೃತ್ತ ಶಿಕ್ಷಕ ಫೈಮೊದ್ದೀನ್, ಶಾಹೀನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಖದೀರ್ ಇದ್ದರು.

ಶಿಕ್ಷಕರ ಹರಸಾಹಸ
ಬೀದರ್:
ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಹಾಜರಾಗಲು ಬಂದ ಬೀದರ್ ತಾಲ್ಲೂಕಿನ ವಿವಿಧ ಶಾಲೆಯ ಶಿಕ್ಷಕರು ಒಒಡಿ ಅನುಮೋದನೆ ಪಡೆಯಲು ಪತ್ರ ಪಡೆಯಲು ಹರಸಾಹಸ ಪಡಬೇಕಾಯಿತು.

ಒಒಡಿ ಪತ್ರ ನೀಡುವುದಕ್ಕಾಗಿ ರಂಗಮಂದಿರದಲ್ಲಿ ಶಿಕ್ಷಕ ಹಾಗೂ ಶಿಕ್ಷಕಿಯರಿಗೆ ಪ್ರತ್ಯೇಕ ಕೌಂಟರ್ ತೆಗೆಯಲಾಗಿತ್ತು. ಒಂದೆಡೆ ಕಾರ್ಯಕ್ರಮ ನಡೆಯುತ್ತಿದ್ದರೆ, ಇನ್ನೊಂದೆಡೆ ಶಿಕ್ಷಕರು ಸಾಲಿನಲ್ಲಿ ನಿಂತುಕೊಂಡು ಒಒಡಿ ಪತ್ರ ಪಡೆಯುವ ದೃಶ್ಯ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.